ಮಾನ್ವಿ: ಕನ್ನಡ ಭಾಷೆ, ಜಲ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರವಿದೆ ಎಂದು ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ 109ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಇದುವರೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದು, ಪರಿಷತ್ ನಡೆಸುವ ಸಮ್ಮೇಳನಗಳು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಸಾಹಿತ್ಯ ಬಗ್ಗೆ ಆಸಕ್ತಿ ಮೂಡಿಸಿವೆ ಎಂದರು.
ಇದನ್ನೂ ಓದಿ: ಕನ್ನಡಿಗರು ಹುಟ್ತಾನೆ ಭಜರಂಗಿಗಳು: ಸಂಸದ ತೇಜಸ್ವಿ ಸೂರ್ಯ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ ಪಾಟೀಲ್ ಮಾತನಾಡಿ, ಕನ್ನಡ ಶ್ರೀಮಂತ ಭಾಷೆಯಾಗಿದೆ. ಪ್ರತಿಯೊಬ್ಬರು ಮಾತೃಭಾಷೆಗೆ ಗೌರವ ನೀಡಿ ಕನ್ನಡ ಬೆಳೆಸಬೇಕು ಎಂದರು.
ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಬೀರಿದ ಪರಿಣಾಮ ಕುರಿತು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಬವರಾಜ ಜಂಗಮರಹಳ್ಳಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಯೂನೂಸ್, ಎಂ.ಡಿ. ಜಾಫರ್, ಶ್ರೀನಿವಾಸ್ ಮೇದಾರನ್ನು ಗೌರವಿಸಲಾಯಿತು. ಕಸಾಪ ಪದಾಧಿಕಾರಿಗಳಾದ ಖೇಮಾನಾಯ್ಕ, ಮರಿಸ್ವಾಮಿ ಮದ್ಲಾಪುರ, ಪತ್ರಕರ್ತರಾದ ಗಯಾಸ್, ಶಿವಕುಮಾರ ಜಗ್ಲಿ, ಹರ್ಷವರ್ದನ್ ಇದ್ದರು.