ಮಾನ್ವಿ: ಬೇಸಿಗೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ದೊರೆಯುವುದು ಕಷ್ಟವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರಿ ಕಚೇರಿ ಆವರಣದಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವರಮನಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಶನಿವಾರ ಪಕ್ಷಿಗಳಿಗಾಗಿ ಆಹಾರ ಮತ್ತು ನೀರುಣಿಸುವ ತೊಟ್ಟಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಬಿಸಿಲಿನ ಧಗೆಯಿಂದ ಪಕ್ಷಿಗಳ ಸಂಕುಲ ನಾಶವಾಗಬಾರದು. ಪ್ರತಿಯೊಬ್ಬರು ಮನೆಯ ಅಂಗಳದಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಪುರಸಭೆ ಆವರಣದಲ್ಲಿನ ಮರಗಳ ಕೊಂಬೆಗಳಿಗೆ ಮಡಿಕೆಯ ಮುಚ್ಚಳವನ್ನು ಕಟ್ಟಿ ಶುದ್ಧ ಕುಡಿಯುವ ನೀರು ಹಾಗೂ ಆಹಾರ ಧಾನ್ಯಗಳ ವ್ಯವಸ್ಥೆಯನ್ನು ಬೇಸಿಗೆ ಮುಗಿಯುವರೆಗೂ ಮಾಡಲಾಗುವುದು ಎಂದರು.