ಹೊನ್ನಾವರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಅಂಗಡಿಗಳು, ಸಂಘ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕ ಅಳಡಿಸುವ ಕುರಿತು ಜಾಗೃತಿ ಅಭಿಯಾನದ ಅಂಗವಾಗಿ ತಾಲೂಕು ಆಡಳಿತ ಸೌಧದ ಎದುರು ಶುಕ್ರವಾರ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್. ಗೌಡ ಮಾತನಾಡಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ತಿದ್ದುಪಡಿ ವಿಧೇಯಕದ ಅನ್ವಯ ಯಾವುದೇ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇಕಡಾ 60 ರಷ್ಟನ್ನು ಪ್ರದರ್ಶಿಸತಕ್ಕದ್ದು. ಇಲ್ಲವಾದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕಾನೂನು ಜಾರಿ ಮಾಡಲಾಗಿದೆ. ಈ ಕುರಿತಂತೆ ಹೊನ್ನಾವರ ತಾಲೂಕಿನ ಎಲ್ಲ ಅಂಗಡಿ, ಕೈಗಾರಿಕೆ, ಸಂಘ ಸಂಸ್ಥೆಗಳು, ಆಸ್ಪತ್ರೆ, ಬ್ಯಾಂಕ್, ಹೋಟೆಲ್, ಶಾಲಾ ಕಾಲೇಜು ಮುಂತಾದವುಗಳು ಕನ್ನಡದ ನಾಮಫಲಕ ಅಳವಡಿಸುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಾದ್ಯಂತ ಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದೆ.
ತಾಲೂಕು ಆಡಳಿತ ಸೌಧದ ಎದುರು ಕರಪತ್ರ ಬಿಡುಗಡೆ ಮಾಡಲಾಗಿದ್ದು, ಈ ಅಭಿಯಾನವು ಬೇರೆ ಬೇರೆ ದಿನಾಂಕದಂದು ಮಂಕಿ, ಗೇರುಸೊಪ್ಪ, ಅರೆ ಅಂಗಡಿ ಹಾಗೂ ಹಳದೀಪುರ ಮಾರ್ಗವಾಗಿ ಪರಿಷತ್ತಿನ ಸರ್ವರೂ ಹೋಗಿ ಕನ್ನಡ ನಾಮಫಲಕ ಬರವಣಿಗೆಯ ಕುರಿತು ಜಾಗೃತಿ ಮೂಡಿಸಗುತ್ತಿದೆ ಎಂದರು.
ಹೊನ್ನಾವರದ ಗ್ರೇಡ್2 ತಹಸೀಲ್ದಾರ್ ಉಷಾ ಪಾವಸ್ಕರ್, ಹಿರಿಯ ಸಾಹಿತಿ ಡಾ. ಎಸ್.ಡಿ. ಹೆಗಡೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ತಾಲೂಕು ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಈಶ್ವರ ಕೊಡಾಣಿ, ಮಹೇಶ ಭಂಡಾರಿ, ಆರ್.ಕೆ. ಮುಕ್ರಿ, ಸಾಧನಾ ಬರ್ಗಿ, ಶುಭಾ ಸಭಾಹಿತ, ಸುಧೀಶ ನಾಯ್ಕ, ಕೇಶವ ಶೆಟ್ಟಿ ಇತರರಿದ್ದರು.