ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ 98 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಸೇತುವೆ ಮೇಲಿನ ಸಂಚಾರವನ್ನು ಸೋಮವಾರ ಸಂಪೂರ್ಣ ನಿಷೇಧಿಸಲಾಗಿದೆ.
ಭಾನುವಾರ ಸಂಜೆಯಿಂದ ಸೇತುವೆ ಮೇಲಿನ ಸಂಚಾರ ನಿಷೇಧ ಸೋಮವಾರವೂ ಮುಂದುವರಿದಿತ್ತು. ಆದರೆ, ಸೋಮವಾರ ಬೆಳಿಗ್ಗೆ ಪಾದಚಾರಿಗಳು ಗುಂಪು ಗುಂಪಾಗಿ ಸೇತುವೆ ಮೇಲೆ ಸಂಚರಿಸಿದರು. ನಂತರ ಪೊಲೀಸರು ಬಿಗಿ ಕಾವಲಿನಿಂದಾಗಿ ಸೇತುವೆ ಮೇಲೆ ಪಾದಚಾರಿಗಳ ಸಂಚಾರವನ್ನು ನಿಷೇಧಿಸಿದರು. ರೋಗಿಗಳು, ಕಾರ್ಮಿಕರು, ಕೃಷಿಕರು ಸೇತುವೆ ಮೇಲಿನ ಸಂಚಾರ ನಿಷೇಧಕ್ಕೆ ಹಿಡಿ ಶಾಪ ಹಾಕುವುದು ಕಂಡು ಬಂತು. ಚಿಕ್ಕಜಂತಕಲ್ನ ಕೆಲವರು ಪೀರಲ ದೇವರ ಹರಕೆಗಾಗಿ ಹುಲಿವೇಷ ಬಣ್ಣ ಧರಿಸಲು ಚಿಕ್ಕಜಂತಕಲ್ನಿಂದ ಪಟ್ಟಣಕ್ಕೆ ಬೆಳಗ್ಗೆ ಬಂದವರು ಸೇತುವೆ ಮೇಲೆ ಪ್ರಯಾಣ ನಿಷೇದಿಸಿದ್ದರಿಂದ ಅನಿವಾರ್ಯವಾಗಿ ಕಡೇಬಾಗಿಲು ಮೂಲಕ ಗಂಗಾವತಿಗೆ ಬಂದು ಅಲ್ಲಿಂದ ಚಿಕ್ಕಜಂತಕಲ್ಗೆ ಸುತ್ತವರಿದು ಹೋಗಬೇಕಾಯಿತು.
ಕಬ್ಬು, ಬಾಳೆ ಜಲಾವೃತ: ತಗ್ಗು ಪ್ರದೇಶಗಳಲ್ಲಿ ಪುನಃ ನೀರು ಹೊಕ್ಕಿದ್ದರಿಂದ ಎರಡನೇ ಬಾರಿ ಕಬ್ಬು, ಬಾಳೆ ಜಲಾವೃತಗೊಂಡಿದೆ. ಬನವಾಸಿ ರಸ್ತೆಯ ಸೇತುವೆ ನೀರಿನಿಂದ ಪುನಾ ಜಲಾವೃತಗೊಂಡಿದೆ. ನದಿ ತಟದ ಮಾಧವ ತೀರ್ಥರ ವೃಂದಾವನ ಜಲಾವೃತಗೊಂಡಿದೆ. ನದಿ ನೀರು ನೋಡಲು ಜನರು ಆಗಮಿಸುತ್ತಿದ್ದಾರೆ. ತುಂಗಭದ್ರಾ ನದಿಗೆ ಜಲಾಶಯದಿಂದ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದ್ದು ನದಿ ಪಾತ್ರದ ಜನತೆ ಜಾಗೃತೆ ವಹಿಸುವಂತೆ ತಹಸೀಲ್ದಾರ್ ಗೌಸಿಯಾಬೇಗಂ ಎಚ್ಚರಿಕೆ ನೀಡಿದ್ದಾರೆ.