ಕಂಪ್ಲಿ: ಪತ್ರಕರ್ತ, ಲೇಖಕ ಬಂಗಿ ದೊಡ್ಡಮಂಜುನಾಥ ರಚಿಸಿದ ‘ಮಂಜುಮಲ್ಲಿಗೆ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ನಡೆಯಿತು.
ಸಾಹಿತ್ಯ ಸಿರಿ ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಚಂದ್ರಶೇಖರ ಶೃಂಗೇರಿ ಮಾತನಾಡಿ, ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಓದುವ ಸಂಸ್ಕೃತಿ ಬೆಳೆಸಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಇದರೊಂದಿಗೆ ಉತ್ತಮ ಜೀವನ ಸಾಗಿಸಲು ಸಾಧ್ಯ. ರಾಜಕಾರಣಿಗಳು ಓದುವ ಸಂಸ್ಕೃತಿ ಬೆಳೆಸಿಕೊಂಡಿದ್ದರೆ ಇಂದಿನ ದುಸ್ಥಿತಿ ಬರುತ್ತಿರಲಿಲ್ಲ ಎಂದರು.
ಕೃತಿ ವಿಮರ್ಶೆ ಮಾಡಿದ ಹಗರಿಬೊಮ್ಮನಹಳ್ಳಿಯ ಲೇಖಕಿ ಸುಧಾ ಚಿದಾನಂದಗೌಡ, ಕಾದಂಬರಿ ಬರವಣಿಗೆ ಸೈನ್ಸ್ ಆಗಿದೆ. ವೈಜ್ಞಾನಿಕ ತಳಹದಿಯಲ್ಲಿ ಬರೆಯುವಂತಹ ಪ್ರಕ್ರಿಯೆಯಾಗಿದೆ. ಕೃತಿ ಎಲ್ಲ ಕಾಲಕ್ಕೂ ಒಪ್ಪುವಂತಿರಬೇಕು. ಓದುಗರು ಕೃತಿಯ ಅಂತಃಸತ್ವವನ್ನು ಹಂಚಿಕೊಂಡಾಗ ಬಹು ಜನರಿಗೆ ಕೃತಿಯನ್ನು ತಲುಪಿಸಲು ಸಾಧ್ಯ ಎಂದರು.
ಕಿನ್ನಾಳ ಕುಸುರಿ ಕಲೆಯ ಜೀವನ ಶ್ರೇಷ್ಠ ಸಾಧನೆಗಾಗಿ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರಗೆ ರಾಜ್ಯಮಟ್ಟದ ಕಲಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಕೃತಿ ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿರಮಿಡ್ ಧ್ಯಾನಪಟು ಕೋನೇರು ಶ್ರೀರಾಮಕೃಷ್ಣ, ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದ ಮುಖ್ಯಸ್ಥ ಗೊಗ್ಗ ಚನ್ನಬಸವರಾಜ, ಸಂಗೀತ ಭಾರತಿ ಸಂಸ್ಥಾಪಕ ಎಚ್.ಪಿ.ಕಲ್ಲಂಭಟ್, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಉಪನ್ಯಾಸಕ ಡಾ.ಎಂ.ಆರ್.ವಾಗೀಶ್, ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಪ್ರಮುಖರಾದ ಎಸ್.ಜಿ.ಚಿತ್ರಗಾರ, ಈರಪ್ಪ ಸೊರಟೂರ ಇತರರಿದ್ದರು.