ಕಂಪ್ಲಿ: ಮೆಣಸಿನಕಾಯಿ ಬೆಳೆಗಾರರು ಸಸಿಗಳಿಗಾಗಿ ನರ್ಸರಿ ಮೇಲೆ ಅವಲಂಬಿತರಾಗದೆ ಸ್ವತಃ ಏರುಮಡಿ ಪದ್ಧತಿಯಲ್ಲಿ ಬೆಳೆಯಬಹುದು ಎಂದು ಹೊಸಪೇಟೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್ ತಿಳಿಸಿದ್ದಾರೆ.
ಹೈಬ್ರಿಡ್ ಸುಧಾರಿತ ತಳಿಗಳ ಮೆಣಸಿನಕಾಯಿ ಬೀಜಗಳನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ವಿಧಾನದೊಂದಿಗೆ ಏರುಮಡಿಗಳಲ್ಲಿ ಸಸಿಗಳ ಬೆಳೆಸಬಹುದು. ತಾಲೂಕಿನಲ್ಲಿ 20 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಅಲ್ಲದೆ ಕೂರಿಗೆ ಬಿತ್ತನೆಯಿಂದ ಎಕರೆಗೆ 20 ಸಾವಿರ ರೂ.ವರೆಗೆ ಉಳಿತಾಯ ಮಾಡಬಹುದು. ಬೀಜೋಪಚಾರ ಮಾಡಿದ ಸುಧಾರಿತ ತಳಿಯ ಬೀಜಗಳನ್ನು ಬಳಸಿದಲ್ಲಿ ಬೇರುಕೊಳೆ ರೋಗ, ನಟೆರೋಗ ಬಾಧೆ ಕಾಣಿಸುವುದಿಲ್ಲ.
ಇದನ್ನೂ ಓದಿ: ನೀರಿನ ನಿರೀಕ್ಷೆಯಲ್ಲಿ ಮೆಣಸಿನಕಾಯಿ ನಾಟಿ
ರೈತರು ಸುಧಾರಿತ ಹೈಬ್ರಿಡ್ ಮೆಣಸಿನಕಾಯಿ ಬೀಜಗಳನ್ನು ಏರುಸಸಿಮಡಿಗಳಲ್ಲಿ ಬೆಳೆಸಿ ವೈಜ್ಞಾನಿಕ ವಿಧಾನದಲ್ಲಿ ನಾಟಿ ಬೆಳೆದಲ್ಲಿ ಎಕರೆಗೆ 15 ಕ್ವಿಂ.ಇಳುವರಿ ಪಡೆದುಕೊಳ್ಳಬಹುದು. ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವಿದ್ದು ಸದುಪಯೋಗಪಡಿಸಿಕೊಳ್ಳಬೇಕು. ಬೀಜೋಪಚಾರ, ಸಸಿಗಳ ನರ್ಸರಿ ನಿರ್ವಹಣೆಯ ತಾಂತ್ರಿಕ ಮಾಹಿತಿಯನ್ನು ವಿಜ್ಞಾನಿಗಳು, ತೋಟಗಾರಿಕೆ ಅಧಿಕಾರಿಗಳಿಂದ ಪಡೆದುಕೊಳ್ಳಬಹುದು ಎಂದು ಜೆ.ಶಂಕರ್ ತಿಳಿಸಿದ್ದಾರೆ.