ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಸಹಿಪ್ರಾ ಶಾಲಾವರಣದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ಗ್ರಾಮಸಭೆ ಜರುಗಿತು. ವಿದ್ಯಾರ್ಥಿಗಳಾದ ಶರಣಮ್ಮ, ಸೌಜನ್ಯಾ, ಶಿವಲೀಲಾ, ಮಲ್ಲಿಕಾರ್ಜುನ ಅನೇಕರು ಮಾತನಾಡಿ, ಸೈಕಲ್, ಸಮತಟ್ಟಾದ ಆಟದ ಮೈದಾನ, ಶೌಚಗೃಹ ವಿದ್ಯುತ್ ಸಂಪರ್ಕ, ಫ್ಯಾನ್, ಬೆಂಚ್, ಆವರಣಗೋಡೆ ಎತ್ತರಿಸುವುದು ಸೇರಿ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲು ಕೋರಿದರು.
ಊರಿನ ಪ್ರಮುಖ ಬಿ.ಎಸ್.ವೆಂಕಟಸ್ವಾಮಿ ಮಾತನಾಡಿ, ಶಾಲಾವರಣ ಗೋಡೆ ಹೊರಭಾಗದಲ್ಲಿ ದೇವರ ಚಿತ್ರಗಳನ್ನು ಚಿತ್ರಿಸಿ ಮಲ-ಮೂತ್ರ ವಿಸರ್ಜನೆ ತಡೆಯಲು ಒತ್ತಾಯಿಸಿದರು. ಬುರೆ ವಿರೂಪಾಕ್ಷಿ ಮಾತನಾಡಿ, ಶಾಲಾವರಣ ಕಲುಷಿತಗೊಳಿಸುತ್ತಿರುವ ಮದ್ಯವ್ಯಸನಿಗಳು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಿಡಿಒ ಶಿಲ್ಪಾರಾಣಿ ಮಾತನಾಡಿ, ಮಕ್ಕಳು ಗ್ರಾಮಸಭೆಯಲ್ಲಿ ಮಂಡಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಶಾಲಾವರಣವನ್ನು ಕಲುಷಿತಗೊಳಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದರು.
ಇದೇ ವೇಳೆ 15ನೇಹಣಕಾಸು ಯೋಜನಡಿ ಗ್ರಾಮಾಡಳಿತದಿಂದ ಸಹಿಪ್ರಾಶಾಲೆಗೆ ಎರಡು ಕಂಪ್ಯೂಟರ್, ಪ್ರಿಂಟರ್, ಬಿಸಿಯೂಟ ತಟ್ಟೆ, ಲೋಟಗಳನ್ನು ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ವಿಪ್ರದ್ ಲಕ್ಷ್ಮೀದೇವಿ ಭೀಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೆಸಿಆರ್ಒ ಎಚ್.ಸಿ.ರಾಘವೇಂದ್ರ, ಗ್ರಾಪಂ ಸದಸ್ಯರಾದ ಬಳ್ಳಾರಿ ಮಾಧವ, ವಿಠ್ಠಲಾಪುರ ಶಾಂತಮ್ಮ, ಅಡಿವೆಮ್ಮ, ಸಾವಿತ್ರಮ್ಮ, ಅಕ್ಕಿ ಕವಿತಾ, ಸುರೇಶ್, ಪ್ರಮುಖರಾದ ಬಿ.ಎಸ್.ಶಿವಮೂರ್ತಿ, ಜಡೆ ಮಹೇದೇವ, ಕಟ್ಟೆ ಶಿವರಾಮಪ್ಪ, ದಂಡಿನ ನರಸಪ್ಪ, ಮುಖ್ಯಶಿಕ್ಷಕ ಮಂಜುನಾಥ ಇತರರು ಇದ್ದರು.