ಬೆಂಗಳೂರು: ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ‘ಕಾಗೆ ಮೊಟ್ಟೆ’ ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದು ನಿಂತಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಂಡಿರುವ ತಂಡ, ಅಕ್ಟೋಬರ್ 1ರಂದು ಚಿತ್ರಮಂದಿರದಲ್ಲಿಯೇ ಸಿನಿಮಾ ತೋರಿಸಲು ನಿರ್ಧರಿಸಿದೆ.
ನವರಸನಾಯಕ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಕಾಗೆಮೊಟ್ಟೆ ಸಿನಿಮಾ, ಮೂವರು ಲೋಕಲ್ ಹುಡುಗರ ಕಥೆ. ಈ ಹುಡುಗರ ಕಥೆಗೆ ನಿರ್ದೇಶಕ ಚಂದ್ರಹಾಸ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗಾದರೆ ಶೀರ್ಷಿಕೆಯ ಅರ್ಥವೇನಿರಬಹುದು? ಕಾಗೆ ಶನೀಶ್ವರನ ವಾಹನ. ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಎಂಬ ಮಾತಿದೆ. ಅದೇರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ.. ಈ ಅರ್ಥದಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕರು.
ಕಳೆದ ಲಾಕ್ಡೌನ್ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜತೆ ಕೈಜೋಡಿಸಿದ್ದಾರೆ.
ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಆಗಮಿಸುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವಂದುಕೊಂಡಿದ್ದನ್ನು ಮಾಡ್ತಾರಾ ಇಲ್ಲವಾ ಎನ್ನುವುದೇ ಕಾಗೆಮೊಟ್ಟೆ ಚಿತ್ರದ ಕಥಾಹಂದರ. ಕೊಳ್ಳೇಗಾಲ, ಚಾಮರಾಜನಗರ ಸೇರಿ ಬೆಂಗಳೂರಿನ ಹಲವು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ.
ಇದನ್ನೂ ಓದಿ: ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!
ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವಿ ಚಿತ್ರದ ಛಾಯಾಗ್ರಹಣ, ನಟ ರಜನಿಕಾಂತ್ ಆಪ್ತಸ್ನೇಹಿತ ರಾಜ್ ಬಹದ್ದೂರ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.