ಭೋಪಾಲ: ಮಧ್ಯಪ್ರದೇಶದಲ್ಲಿನ ರಾಜಕೀಯ ಬೆಳವಣಿಗೆ ಹಲವು ತಿರುವುಗಳನ್ನು ಪಡೆದುಕೊಂಡಿದ್ದು ರಾಜಕೀಯ ಹಲವು ಸೂಕ್ಷ್ಮ ಲೆಕ್ಕಾಚಾರದ ಪ್ರಕಾರವೇ ಮುನ್ನಡೆಯುತ್ತಿದೆ. ಕಮಲನಾಥ್ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿ ಸೇರುವ ವಿಚಾರ ಇದೀಗ ದೃಢಪಟ್ಟಿದ್ದು, ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ವಿಷಯವೂ ಖಚಿತವಾಗಿದೆ. ಈ ನಡುವೆ, ಬಹುಮತ ಕಳೆದುಕೊಂಡ ಕಮಲನಾಥ್ ಸರ್ಕಾರದ ವಿರುದ್ಧ ಮಾರ್ಚ್ 16ಕ್ಕೆ ಫ್ಲೋರ್ ಟೆಸ್ಟ್ ನಡೆಯಬಹುದು ಎಂಬ ನಿರೀಕ್ಷೆ ಇದೆ.
ಆದರೆ, ಮುಖ್ಯಮಂತ್ರಿ ಕಮಲನಾಥ್ ಅವರು ಸೋಮವಾರ ತಡರಾತ್ರಿ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಂದಲೂ ರಾಜೀನಾಮೆ ಸ್ವೀಕರಿಸಿರುವ ಕಾರಣ ಸರ್ಕಾರ, ಫ್ಲೋರ್ ಟೆಸ್ಟ್ ಎದುರಿಸುವ ತನಕ ಮುಂದುವರಿಯಲಿದೆಯೇ ಎಂಬ ಸಂದೇಹವೂ ಇದೆ. ಈ ನಡುವೆ, ಮಂಗಳವಾರ ಜ್ಯೋತಿರಾದಿತ್ಯ ಸಿಂಧ್ಯಾ ಟ್ವೀಟ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಬಹಿರಂಗಗೊಳಿಸಿದ ಬಳಿಕ ರಾಜಕೀಯ ಬೆಳವಣಿಗೆಗೆ ಇನ್ನಷ್ಟು ಚುರುಕು ಸಿಕ್ಕಿದೆ. ಜ್ಯೋತಿರಾದಿತ್ಯ ಸಿಂಧ್ಯಾ ಈ ನಿರ್ಧಾರ ಪ್ರಕಟಿಸಿದ ಈ ದಿನ ತಂದೆ ಮಾಧವರಾವ್ ಸಿಂಧ್ಯಾ ಅವರ 75ನೇ ಜಯಂತಿ. ಈ ಹಿನ್ನೆಲೆಯಲ್ಲಿ ಅವರ ಬದುಕಿನ ನಿರ್ಣಾಯಕ ದಿನ ಇದು ಎಂಬ ವಿಶ್ಲೇಷಣೆಯೂ ನಡೆದಿದೆ.
ಮಹತ್ವದ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಮಧ್ಯಪ್ರದೇಶದಿಂದ ಬಿಜೆಪಿಯ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆ ಮಾಡುವ ಕೆಲಸ ನಡೆಯಲಿದ್ದು, ಇಂದು ಸಂಜೆ ವೇಳೆಗೆ ಅಧಿಕೃತ ಘೋಷಣೆ ಪ್ರಕಟವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)
ಮೋದಿ, ಷಾ ಭೇಟಿ ಬಳಿಕ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ; ಸೋನಿಯಾ ಗಾಂಧಿಗೆ ಪತ್ರ ರವಾನೆ