ಹುಳಿಯಾರು(ತುಮಕೂರು): ಸೊಂಟ ಮುರಿದುಕೊಂಡು ವೃದ್ಧರೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಮನೆಯಲ್ಲೇ ಇದ್ದಾರೆ. ಇವರ ಮಕ್ಕಳಿಬ್ಬರೂ ಅಂಗವಿಕಲರು. ಸರ್ಕಾರದಿಂದ ಮಂಜೂರಾಗಿದ್ದ ಜಮೀನು ವಿಚಾರವಾಗಿ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ನ್ಯಾಯಾಧೀಶರಿಗೇ ದೂರು ಕೊಡಲು ಯೋಚಿಸಿದ್ದರು. ಇವರ ಅಸಹಾಯಕ ಪರಿಸ್ಥಿತಿಯನ್ನು ಅರಿತ ನ್ಯಾಯಾಧೀಶರೇ ಖುದ್ದು ಇವರ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ್ದಾರೆ.
ಇಂತಹ ಅಪರೂಪದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆ ಗ್ರಾಮದಲ್ಲಿ ನಡೆದಿದೆ. 80 ವರ್ಷದ ಪುಟ್ಟಯ್ಯ ಅವರಿಗೆ 1966ರಲ್ಲಿ ಜೀವನೋಪಾಯಕ್ಕೆ ಸ.ನಂ.21/1ರಲ್ಲಿ ಸರ್ಕಾರದಿಂದ 2 ಎಕರೆ ಜಮೀನು ಮಂಜೂರಾಗಿತ್ತು. ಆದರೆ 20 ವರ್ಷದ ಹಿಂದೆ ಈತ ಮರದಿಂದ ಬಿದ್ದು ಸೊಂಟ ಮುರಿದುಕೊಂಡಿದ್ದರು. ದುರದೃಷ್ಟವಶಾತ್ ಈತನ ಇಬ್ಬರು ಮಕ್ಕಳೂ ಅಂಗವಿಕಲರು. ಇವರ ಅಸಹಾಯಕತೆ ಅರಿತ ಸವರ್ಣಿಯರು ಜಮೀನು ಸ್ವಾಧೀನ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ನಮ್ಮ ಭೂಮಿಯನ್ನು ನಮಗೆ ಕೊಡಿಸುವಂತೆ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ಪುಟ್ಟಯ್ಯ ತಮ್ಮೂರಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದ ಬಳಿ ಮತ್ತೊಬ್ಬರ ಆಶ್ರಯ ಪಡೆದು ತೆರಳಲು ಪ್ರಯತ್ನಿಸಿದ್ದರು.
ಈ ವಿಷಯ ತಿಳಿದು ಚಿಕ್ಕನಾಯಕನಹಳ್ಳಿ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರೇ ವೃರ್ದಧನ ಮನೆಗೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿದರು. ನ್ಯಾಯಾಧೀಶರಾದ ವೆಂಕಟೇಶಪ್ಪ ಮತ್ತು ಶ್ರೀನಾಥ್ ಅವರು ಕಾನೂನು ಅರಿವು-ನೆರವು ಸಭೆಗೂ ಮುಂಚೆಯೇ ವೃದ್ಧನ ಮನೆಗೆ ತೆರಳಿ ಫುಡ್ ಕಿಟ್ ನೀಡಿ ಮನವಿ ಸ್ವೀಕರಿಸಿ ಮಾನವೀಯತೆ ಮೆರೆದರು. ಅಲ್ಲದೆ ಸರ್ಕಾರಿ ವಕೀಲರನ್ನು ನೇಮಿಸಿ ಆಗಿರುವ ಅನ್ಯಾಯ ಸರಿಪಡಿಸಿ ಕೊಡುವುದಾಗಿಯೂ ಭರವಸೆ ನೀಡಿದರು.
ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ಚಾರ್ಜ್ಶೀಟ್ನಲ್ಲಿದೆ ತಾಯಿಯ ಅಸಲಿ ಮುಖವಾಡ
ಗುಬ್ಬಿ ಶ್ರೀನಿವಾಸ್ ಮನೆಗೆ ಸಾ.ರಾ.ಮಹೇಶ್ ಭೇಟಿ: ಮಗನ ಜತೆ ಕೆಲಕಾಲ ಮಾತುಕತೆ