ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್ನಲ್ಲಿ ಅಷ್ಟೆಲ್ಲಾ ಸಂಚಲನಗಳು ಉಂಟಾಗುತ್ತಿದ್ದರೂ, ಹಿರಿಯ ನಟಿ ಜಯಾ ಬಚ್ಚನ್ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಏನೊಂದೂ ಮಾತನಾಡಿರಲಿಲ್ಲ. ಈಗ ಅವರು ಮೊದಲ ಬಾರಿಗೆ, ಅವರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಈ ಸಲದ ಹಿಂದಿ ಬಿಗ್ಬಾಸ್ಗೆ ಸಲ್ಮಾನ್ ಜತೆ ಇನ್ನೊಬ್ಬ ನಿರೂಪಕ
ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್ ಅವರು ಸಂಸತ್ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ರಾಜ್ಯಸಭೆಯ ಜೀರೋ ಹವರ್ನಲ್ಲಿ ಮಾತನಾಡಿರುವ ಅವರು, ‘ಸೋಷಿಯಲ್ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು’ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ನಟಿ ಕಂಗನಾ ರಣಾವತ್ ಅವರು ಬಾಲಿವುಡ್ ಗಟಾರವಾಗುತ್ತಿದೆ ಮತ್ತು ಚಿತ್ರರಂಗದಲ್ಲಿರುವ ಶೇ 99ರಷ್ಟು ಜನ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು.
ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, ‘ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪು. ನಿನ್ನೆಯಷ್ಟೇ ಚಿತ್ರರಂಗದವರೇ ಆದ ಒಬ್ಬರು, ಚಿತ್ರರಂಗದ ವಿರುದ್ಧ ಮಾತನಾಡಿದರು. ಇದು ನಾಚಿಕೆ ಪಡಬೇಕಾದ ವಿಷಯ’ ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ಇದನ್ನೂ ಓದಿ: ರಾಗಿಣಿ ಕೈಯಲ್ಲಿ ‘ರಾಮಾಯಣ’ನಾ?
ಸೋಮವಾರವಷ್ಟೇ ನಟ ಮತ್ತು ಸಂಸದ ರವಿಕಿಶನ್ ಸಂಸತ್ತಿನಲ್ಲಿ ಮಾತನಾಡಿದ್ದರು. ‘ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗೊ ಪಂಜಾಬ್ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್ ತರಲಾಗುತ್ತಿದೆ. ಡ್ರಗ್ಸ್ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು.