ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಸಂಭ್ರಮ ಗುಜರಾತಿನ ಜಾಮ್ನಗರದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ದಂಡೇ ಸಂಭ್ರಮದಲ್ಲಿ ಭಾಗಿಯಾಗಿತ್ತು. ಅದರಲ್ಲೂ ಸಿನಿ ಸೆಲೆಬ್ರಿಟಿಗಳ ಹಾಡು, ಡಾನ್ಸ್, ಮೋಜು ಮಸ್ತಿ ಪ್ರೀ ವೆಡ್ಡಿಂಗ್ಗೆ ಹೊಸ ರಂಗು ತುಂಬಿತು. ಮೊನ್ನೆಯಷ್ಟೇ ಪ್ರೀ ವೆಡ್ಡಿಂಗ್ ಸಂಭ್ರಮ ಮುಗಿದಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಸ್ಟೋರಿ ಪ್ರೀ ವೆಡ್ಡಿಂಗ್ನಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳಿಗೆ ಟಾಂಗ್ ಕೊಟ್ಟಂತಿದೆ.
ಲಕ್ಷಾಂತರ ರೂಪಾಯಿ ನೀಡಿದರು ಮದುವೆ ಸಮಾರಂಭದಲ್ಲಿ ಹಾಡುವುದಿಲ್ಲ ಎಂದು ಹಳೆಯ ಸಂದರ್ಶನವೊಂದರಲ್ಲಿ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಹೇಳಿದ್ದ ಸುದ್ದಿಯ ಸ್ಕ್ರೀನ್ ಶಾಟ್ ಮತ್ತು ಲಿಂಕ್ ಅನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿರುವ ಕಂಗನಾ ತಮ್ಮನ್ನು ಲತಾ ಮಂಗೇಶ್ಕರ್ಗೆ ಹೋಲಿಕೆ ಮಾಡಿಕೊಂಡಿದ್ದಾರೆ.
ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಲು ಬಯಸುತ್ತೇನೆ
ಸುದೀರ್ಘ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ “ನಾನು ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದೇನೆ ಆದರೆ, ಲತಾ ಜೀ ಮತ್ತು ನಾನು ನಮ್ಮ ಕ್ರೆಡಿಟ್ಗೆ ಭಾರಿ ಸೂಪರ್ ಹಿಟ್ ಹಾಡುಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು. ಆದರೆ, ನನಗೆ ಎಷ್ಟೇ ಆಮಿಷಗಳು ಬಂದರೂ ನಾನು ಮದುವೆಗಳಲ್ಲಿ ಎಂದಿಗೂ ನೃತ್ಯ ಮಾಡಲಿಲ್ಲ, ಅನೇಕ ಸೂಪರ್ ಹಿಟ್ ಐಟಂ ಸಾಂಗ್ಗಳನ್ನು ಸಹ ನನಗೆ ನೀಡಲಾಯಿತು ಆದರೆ, ಅದನ್ನು ನಿರಾಕರಿಸಿದೆ ಮತ್ತು ನಾನು ಪ್ರಶಸ್ತಿ ಕಾರ್ಯಕ್ರಮಗಳನ್ನು ಸಹ ತಪ್ಪಿಸಿದೆ. ಖ್ಯಾತಿ ಮತ್ತು ಹಣವನ್ನು ಬೇಡವೆಂದು ಹೇಳಲು ಬಲವಾದ ವ್ಯಕ್ತಿತ್ವ ಮತ್ತು ಘನತೆ ಬೇಕು. ಈ ಅಡ್ಡದಾರಿಯ ಜಗತ್ತಿನಲ್ಲಿ ಯುವ ಪೀಳಿಗೆಯು ಪ್ರಾಮಾಣಿಕತೆಯ ಸಂಪತ್ತನ್ನು ಮಾತ್ರ ಅರ್ಥಮಾಡಿಕೊಳ್ಳಬೇಕು ಎಂದು ಕಂಗನಾ ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ಪರೋಕ್ಷವಾಗಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ನಲ್ಲಿ ಕುಣಿದು ಕುಪ್ಪಳಿಸಿದ ಸೆಲೆಬ್ರಿಟಿಗಳಿಗೆ ಕಂಗನಾ ಟಾಂಗ್ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಅಂದಹಾಗೆ ಕಂಗನಾ ರಣಾವತ್ ಅವರು ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ನಲ್ಲಿ ಭಾಗವಹಿಸಿಲ್ಲ. ಅವರನ್ನು ಆಹ್ವಾನಿಸಲಾಗಿಲ್ಲ ಎಂದು ಹಲವರು ಭಾವಿಸಿದ್ದಾರೆ. ಆದರೆ, ಕಂಗನಾರ ಈ ಇನ್ಸ್ಟಾಗ್ರಾಂ ಸ್ಟೋರಿ ಬೇರೆ ಕಥೆಯನ್ನೇ ಹೇಳುತ್ತಿದೆ. ಕಂಗನಾ ರಣಾವತ್, ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದರು ಎನ್ನಲಾಗಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಂಗನಾ ರಣಾವತ್ ಅವರು ಎಮೆರ್ಜೆನ್ಸಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸ್ವತಃ ಕಂಗನಾ ಅವರೇ ಬಂಡವಾಳ ಹೂಡಿಕೆ ಮಾಡಿದ್ದು, ಆರ್ಥಿಕವಾಗಿ ಅಸ್ಥಿರಳಾಗಿದ್ದೇನೆ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು. (ಏಜೆನ್ಸೀಸ್)
ಲೇಡಿ ಡಾನ್ ಮದ್ವೆಯಾಗಲು ಗ್ಯಾಂಗ್ಸ್ಟರ್ಗೆ ಪೆರೋಲ್ ನೀಡಿದ ಕೋರ್ಟ್: ಇಬ್ಬರ ಲವ್ ಸ್ಟೋರಿಯೇ ರೋಚಕ
ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಬಿಗ್ ರಿಲೀಫ್: ಇಡಿ ಪ್ರಕರಣ ರದ್ದು ಮಾಡಿದ ಸುಪ್ರೀಂಕೋರ್ಟ್