ನವದೆಹಲಿ: ರಾಜಸ್ಥಾನದ ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿರುವ ಮೇಡಂ ಮಿಂಜ್ ಅಲಿಯಾಸ್, ಅನುರಾಧ ಚೌಧರಿಯನ್ನು ಮದುವೆಯಾಗಲು ಕಲಾ ಜಥೇಡಿ ಎಂದು ಕುಖ್ಯಾತಿ ಪಡೆದಿರುವ ಗ್ಯಾಂಗ್ಸ್ಟಾರ್ ಸಂದೀಪ್ಗೆ ನ್ಯಾಯಾಲಯ ತಾತ್ಕಲಿಕವಾಗಿ ಜೈಲಿನಿಂದ ಬಿಡುಗಡೆ ಮಾಡಿದೆ.
ಅನುರಾಧಳನ್ನು ರಾಜಸ್ಥಾನದ ರಿವಾಲ್ವರ್ ರಾಣಿ ಎಂದು ಕರೆಯಲಾಗುತ್ತದೆ. ಇಬ್ಬರ ಮದುವೆ ಮಾರ್ಚ್ 12ರಂದು ಮಂಗಳವಾರ ನಿಗದಿಯಾಗಿದೆ. ಮದುವೆಯ ಮರುದಿನ ನಡೆಯುವ ಇತರೆ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಸಹ ನ್ಯಾಯಾಲಯ ಸಂದೀಪ್ಗೆ ಅನುಮತಿ ನೀಡಿದೆ. 2021ರಲ್ಲಿ ಸಂದೀಪ್ ಮತ್ತು ಆತನ ಗರ್ಲ್ಫ್ರೆಂಡ್ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಕಲಾ ಜಥೇಡಿ ಯಾರು?
ಸಂದೀಪ್ ವಿರುದ್ಧ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (MCOCA) ಅಡಿಯಲ್ಲಿ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿರುವ ಆರೋಪವಿದೆ. ಈತ ದೆಹಲಿಯಲ್ಲಿ ಕೊಲೆ, ಸುಲಿಗೆ ಮತ್ತು ಇತರ ಗಂಭೀರ ಅಪರಾಧಗಳು ಸೇರಿದಂತೆ 15 ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿಯೂ 25ಕ್ಕೂ ಹೆಚ್ಚು ಬಾಕಿ ಪ್ರಕರಣಗಳಿವೆ. ಸದ್ಯ ತನ್ನ ಮದುವೆಗಾಗಿ ಜಾಥೇಡಿ, ಪೆರೋಲ್ನಲ್ಲಿರುವ ಸಂದರ್ಭದಲ್ಲಿ ಆತನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಸಾಗರ್ ಧನಖಡ್ ಎಂಬ ಪ್ರಸಿದ್ಧ ಕುಸ್ತಿಪಟು ದ್ವೇಷದ ಕಾರಣದಿಂದ ಕೊಲೆಯಾದ ನಂತರ ಸಂದೀಪ್ ಹೆಸರು ಹೆಚ್ಚು ಮುನ್ನೆಲೆಗೆ ಬಂದಿತು. ಸಂದೀಪ್ ಅಲಿಯಾಸ್ ಕಲಾ ಜಥೇಡಿ, ಕುಸ್ತಿಪಟು ಸಾಗರ್ ಧನಖಡ್ ಆಪ್ತ ಎನ್ನಲಾಗಿದ್ದು, ಇದೇ ಕಾರಣದಿಂದ ಸಂದೀಪ್ ಮತ್ತೊಬ್ಬ ಕುಸ್ತಿಪಟು ಸುಶೀಲ್ ಕುಮಾರ್ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸಂದೀಪ್, ವಿವಿಧ ರಾಜ್ಯಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಜತೆ ಸಂಬಂಧ
ದೆಹಲಿಯ ತಿಹಾರ್ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಜತೆಯೂ ಕಲಾ ಜಥೇಡಿಗೆ ಸಂಬಂಧವಿದೆ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಜೈಲಿನೊಳಗೆ ಕಲಾ ಜಥೇಡಿಗೆ ಸಹಾಯ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಿಷ್ಣೋಯ್ ಸೂಚನೆಯ ಮೇರೆಗೆ ರಾಜಸ್ಥಾನ ಮತ್ತು ದೆಹಲಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಅನ್ನು ಕಲಾ ಜಥೇಡಿ ಮುನ್ನಡೆಸಿದನು ಎಂದು ಅನೇಕ ವರದಿಗಳು ಹೇಳಿವೆ.
ಗ್ಯಾಂಗ್ಸ್ಟರ್ಸ್ ಲವ್ಸ್ಟೋರಿ
ಲೇಡಿ ಡಾನ್ ಮೇಡಂ ಮಿಂಜ್ ಜತೆ ಮದುವೆಯಾಗಲು ಮಾನವೀಯ ಆಧಾರದ ಮೇಲೆ ಪೆರೋಲ್ ನೀಡುವಂತೆ ಕಲಾ ಜಥೇಡಿ ಅರ್ಜಿ ಸಲ್ಲಿಸಿದ್ದನು. ಮನವಿನ ಪುರಷ್ಕರಿಸಿರುವ ಕೋರ್ಟ್ ಅನುಮತಿ ಸಹ ನೀಡಿದೆ. ಮೇಡಂ ಮಿಂಜ್ ಮತ್ತು ಜಥೇಡಿ ಇಬ್ಬರು ಮೊದಲ ಬಾರಿಗೆ ಕೋವಿಡ್ 19 ಸಂದರ್ಭದಲ್ಲಿ ಭೇಟಿಯಾದರು. ಇಬ್ಬರ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿತು. 2021ರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅನುರಾಧ ಜಾಮೀನು ಪಡೆದು ಹೊರಬಂದಳು. ಆದರೆ, ಜಥೇಡಿ ಮಾತ್ರ ಜೈಲಿನಲ್ಲೇ ಉಳಿದನು. ಆದಾಗ್ಯೂ ಅನುರಾಧ ಆಗಾಗ ಜೈಲಿಗೆ ಭೇಟಿ ನೀಡಿ ಜಥೇಡಿ ಜತೆ ಮಾತುಕತೆ ನಡೆಸುತ್ತಿದ್ದಳು.
ಯಾರು ಈ ಮೇಡೆಂ ಮಿಂಜ್?
ಅನುರಾಧ ಅಲಿಯಾಸ್ ಮೇಡಂ ಮಿಂಜ್, ಸಾಮಾನ್ಯ ಕುಟುಂಬಕ್ಕೆ ಸೇರಿದವಳು ಮತ್ತು ರಾಜಸ್ಥಾನದ ಸಿಕರ್ ಜಿಲ್ಲೆಯ ಅಲ್ಫಾಸರ್ ಗ್ರಾಮದ ನಿವಾಸಿ. ಷೇರು ಮಾರುಕಟ್ಟೆಯಲ್ಲಿ ತನ್ನ ಪಾಲುದಾರರಿಂದ ವಂಚನೆಗೊಳಗಾದ ಬಳಿಕ 1 ಕೋಟಿಗೂ ಅಧಿಕ ಸಾಲದ ಹೊರೆಯಿಂದಾಗಿ ಆಕೆ ಅಪರಾಧದ ಜಗತ್ತಿಗೆ ಇಳಿದಳು. ಅಚ್ಚರಿಯ ಸಂಗತಿ ಏನೆಂದರೆ, ಅನುರಾಧಾ ಉತ್ತಮ ಶಿಕ್ಷಣ ಪಡೆದಿದ್ದಾಳೆ. ಮೂಲಗಳ ಪ್ರಕಾರ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಪದವಿ ಪಡೆದಿದ್ದಾಳೆ.
ರಿವಾಲ್ವರ್ ರಾಣಿ ಎಂದೇ ಕರೆಸಿಕೊಳ್ಳುವ ಅನುರಾಧಾ, ತಾನು ಅಪರಾಧದ ಜಗತ್ತನ್ನು ಶಾಶ್ವತವಾಗಿ ತೊರೆದಿದ್ದೇನೆ ಮತ್ತು ಜೀವನದಲ್ಲಿ ಎಂದಿಗೂ ಹಿಂತಿರುಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಈಗ ಆಕೆ ಕಲಾ ಜಥೇಡಿಯ ಹಿರಿಯ ಪಾಲಕರೊಂದಿಗೆ ಇದ್ದು ಅವರನ್ನು ಪಾಲನೆ ಮಾಡುತ್ತಿದ್ದಾರೆ. ಜಥೇಡಿ ತನ್ನ ಹೆತ್ತವರೊಂದಿಗೆ ಅನುರಾಧಾ ನಡವಳಿಕೆಯಿಂದ ಪ್ರಭಾವಿತನಾಗಿ, ಆಕೆಗೆ ಮದುವೆಯ ಪ್ರಸ್ತಾಪವನ್ನು ಮಾಡಿದನು. ಮೇಡಂ ಮಿಂಜ್ ಈಗ ತನ್ನ ಪತಿಗೆ ಜೈಲಿನಿಂದ ಹೊರಬರಲು ಸಹಾಯ ಮಾಡುವ ಉದ್ದೇಶದಿಂದ ಕಾನೂನು ಅಧ್ಯಯನ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. (ಏಜೆನ್ಸೀಸ್)
ರಾಮೇಶ್ವರಂ ಕೆಫೆ ರೀತಿಯಲ್ಲೇ ಬಸ್, ರೈಲು ನಿಲ್ದಾಣ ಸ್ಪೋಟ: ಸಿಎಂ, ಡಿಸಿಎಂಗೂ ಬಾಂಬ್ ಬೆದರಿಕೆ
ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಬಿಗ್ ರಿಲೀಫ್: ಇಡಿ ಪ್ರಕರಣ ರದ್ದು ಮಾಡಿದ ಸುಪ್ರೀಂಕೋರ್ಟ್