ಮೂಡಬಿದಿರೆ: ಜೈನ ಸಮುದಾಯದ ಅತ್ಯಂತ ಪೂಜನೀಯ ಸ್ಥಳಗಳಲ್ಲಿ ಒಂದಾದ ಶಿಖರ್ಜಿ ಬೆಟ್ಟವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸ ಜಾರ್ಖಂಡ್ ಸರ್ಕಾರ ಮುಂದಾಗಿದೆ. ಈಗ ಜಾರ್ಖಂಡ್ ಸರ್ಕಾರದ ವಿರುದ್ಧ ಜೈನ ಸಮುದಾಯ ಪ್ರತಿಭಟನೆಗಳನ್ನು ಯೋಜಿಸಿದೆ. ಇತ್ತೀಚೆಗೆ ಪುಣೆಯಲ್ಲಿ ಮತ್ತು ಮುಂಬೈನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಇನ್ನೂ ಹೆಚ್ಚಿನವು ಶೀಘ್ರದಲ್ಲೇ ನಡೆಯಲಿವೆ ಎಂದು ಜೈನ ಮುಖಂಡರು ತಿಳಿಸಿದ್ದಾರೆ. ಈಗ ‘ಶಿಖರ್ಜಿ ಉಳಿಸಿ’ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದ್ದು ನಗರದ ಅನೇಕ ಜೈನ ದೇವಾಲಯಗಳು ಭಕ್ತರಿಂದ ಸಹಿ ಮಾಡುವಂತೆ ಮನವಿಗಳನ್ನು ಹಸ್ತಾಂತರಿಸುತ್ತಿವೆ. ಅರ್ಜಿಗಳನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲಾಗುವುದು ಎನ್ನಲಾಗುತ್ತಿದೆ.
ಇದೇ ಪ್ರತಿಭಟನೆಗಳ ಭಾಗವಾಗಿ ಮೂಡುಬಿದಿರೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈನ್ ಮಿಲನ್, ಮಹಾವೀರ ಸಂಘ, ಸರ್ವ ಮಂಗಳ ಜೈನ ಮಹಿಳಾ ಸಂಘ, ಮುಂತಾದ ಜೈನ ಸಂಘಟನೆಗಳು ಮೂಡುಬಿದ್ರೆಯ ತಹಶೀಲ್ದಾರರ ಮೂಲಕ ರಾಷ್ಟ್ರಪತಿ, ಪ್ರಧಾನಿ ಮೋದಿಗೆ, ಗೃಹ ಮಂತ್ರಿಗಳಿಗೆ ಮತ್ತು ಜಾರ್ಖಂಡ್ನ ಮುಖ್ಯಮಂತ್ರಿಗೆ, ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.
ಬಿಜೆಪಿಗೆ ಜೈನ ಸಮುದಾಯದ ಅನೇಕ ಮತಗಳು ಬೀಳುತ್ತಿವೆ. ಅದಲ್ಲದೇ ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದ್ದು ಈ ಪ್ರತಿಭಟನೆಗಳು ಮಹತ್ವ ಪಡೆದಿವೆ ಎನ್ನಲಾಗಿದೆ. ಜೈನ ಸಮುದಾಯ, ಇಡೀ ಶಿಖರ್ಜಿ ಬೆಟ್ಟವನ್ನು ಜೈನ ಸಮುದಾಯದವರ ಆರಾಧನಾ ಸ್ಥಳವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದೆ.
ಏನಿದು ಶಿಖರ್ಜಿ ಬೆಟ್ಟ?
ಸಮ್ಮೇದ ಶಿಖರ್ಜಿಯನ್ನು ಮೂರು ಸಾವಿರ ವರ್ಷಗಳಿಂದ ಜೈನರು ‘ಮಹಾತೀರ್ಥ’ ಎಂದು ಪರಿಗಣಿಸುತ್ತಾರೆ. ಏಕೆಂದರೆ ಜೈನ ಧರ್ಮದ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಈ ಬೆಟ್ಟದಿಂದ ಮಹಾನಿರ್ವಾಣವನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ಯಾತ್ರಾರ್ಥಿಗಳು ಬರಿಗಾಲಿನಲ್ಲಿ ಬೆಟ್ಟವನ್ನು ಏರಿ 27 ಕಿಮೀ ‘ಪರಿಕ್ರಮ’ ಮಾಡುತ್ತಾರೆ. ಪರಿಕ್ರಮ ಮುಗಿಯುವವರೆಗೆ ಜೈನ ಯಾತ್ರಿಕರು ಆಹಾರ ಮತ್ತು ನೀರನ್ನು ಸೇವಿಸುವುದಿಲ್ಲ. ಜೈನರು ದೇಶಾದ್ಯಂತ ಅಲ್ಪಸಂಖ್ಯಾತರಾಗಿ ಉಳಿದುಕೊಂಡಿದ್ದು ಇವರ ಬೇಡಿಕೆಯನ್ನು ಈಡೇರಿಸಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.