ನವದೆಹಲಿ: ಸ್ಥಳೀಯ ರಾಜಕೀಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪರಿಸ್ಥಿಯನ್ನು ವಿವರವಾಗಿ ತಿಳಿಸಿದ್ದೇನೆ. ಎಲ್ಲವನ್ನೂ ಪರಿಶೀಲನೆ ಮಾಡಿ, ಚರ್ಚೆ ಮಾಡಿ ನಿರ್ಣಯಕ್ಕೆ ಬರುತ್ತೇವೆ ಎಂದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ಸುದೀರ್ಘ ಮಾತುಕತೆಯ ನಂತರ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಒಂದಷ್ಟು ವಿಚಾರಗಳನ್ನು ನಾವು ಕೂಡ ಅವರಿಗೆ ಹೇಳಬೇಕಾಗುತ್ತದೆ. ಮುಂದೆ ಅವರು ತೆಗೆದುಕೊಳ್ಳುವ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ. ಜೆ.ಪಿ ನಡ್ಡಾ ಅವರೊಂದಿಗೆ ಆಹ್ಲಾದಕರವಾದ ಚರ್ಚೆ ನಡೆದಿದ್ದು, ನನ್ನ ಮನವಿಯನ್ನು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಸಮಾಧಾನವಾಗಿದೆ!
ಜೆ.ಪಿ ನಡ್ಡಾ ನನ್ನ ಮನವಿಯನ್ನು ಕೇಳಿಸಿಕೊಂಡಿದ್ದಾರೆ. ಮತ್ತೆ ನಾನು ಯಾರನ್ನೂ ಭೇಟಿಯಾಗುವುದಿಲ್ಲ. ಎರಡು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಎಲ್ಲಿಯೂ ನಾನು ಸಿಟ್ಟು ಮಾಡಿಕೊಂಡಿಲ್ಲ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುತ್ತಾರೋ/ಇಲ್ಲವೋ ಗೊತ್ತಿಲ್ಲ, ಅದು ಅವರಿಗೆ ಬಿಟ್ಟಿರುವುದು. ಇವತ್ತಿನ ಭೇಟಿಯಿಂದ ನಾನಗೆ ಸಮಾಧಾನವಾಗಿದೆ ಎಂದರು. ಈ ಮೂಲಕ ಕೈತಪ್ಪಲಿದ್ದ ಟಿಕೆಟ್ ಮತ್ತೆ ಸಿಗಲಿದೆ ಎಂಬ ಬಗ್ಗೆ ಪರೋಕ್ಷವಾಗಿ ಸೂಚನೆ ನೀಡಿದರು.
ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ…
ಜಗದೀಶ ಶೆಟ್ಟರ್ ಅವರಿಗೆ ಮಂಗಳವಾರ ಬೆಳಗ್ಗೆ ಫೋನ್ ಕರೆ ಮಾಡಿದ್ದ ಬಿಜೆಪಿ ವರಿಷ್ಠರು, ಬೇರೆಯವರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶೆಟ್ಟರ್, ನಾನು 30 ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಟಿಸಿದ್ದೇನೆ. ನೂರಾರು ಜನರಿಗೆ ಪಕ್ಷದ ಟಿಕೆಟ್ ಕೊಡುವ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ನೀಡಬಾರದು ಎನ್ನುವುದಕ್ಕೆ ಕಾರಣ ಏನು? ಎಂದು ವರಿಷ್ಠರಿಗೆ ಮರು ಪ್ರಶ್ನೆ ಹಾಕಿದ್ದರು. ಸಮೀಕ್ಷೆ ಧನಾತ್ಮಕವಾಗಿದೆ. ನನ್ನ ಮೇಲೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲ. ಪಕ್ಷಕ್ಕಾಗಿ ದುಡಿದಿರುವುದನ್ನು ವರಿಷ್ಠರಿಗೆ ಹೇಳಿದ್ದೇನೆ ಎಂದು ಜಗದೀಶ ಶೆಟ್ಟರ್ ಹೇಳಿದ್ದರು.