ಬೆಂಗಳೂರು: ಅರಬ್ ರಾಷ್ಟ್ರ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಈಗಾಗಲೆ ಕೆಲ ಅನುಭವಿ ಮತ್ತು ಯುವ ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಕೆಲ ಯುವ-ಅನುಭವಿ ಸ್ಟಾರ್ ಆಟಗಾರರು ಕೆಲ ಐಪಿಎಲ್ ತಂಡಗಳಲ್ಲಿದ್ದರೂ, ಟೂರ್ನಿಯಲ್ಲಿ ಇನ್ನೂ ಒಂದೇ ಒಂದು ಪಂದ್ಯ ಆಡುವ ಅವಕಾಶವನ್ನೂ ಪಡೆದಿಲ್ಲ. ಐಪಿಎಲ್ನಲ್ಲಿ ಈ ಹಿಂದೆ ಮಿಂಚಿರುವ ಅಥವಾ ಮುಂದೆ ಮಿಂಚಬಲ್ಲಂಥ ಈ ಆಟಗಾರರಿಗೆ ಯಾಕೆ ಇನ್ನೂ ಆಡುವ ಅವಕಾಶ ಲಭಿಸಿಲ್ಲ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಅಂಥ ಕೆಲ ಆಟಗಾರರ ವಿವರ, ಅವರು ಯಾಕೆ ಆಡುವ ಅವಕಾಶ ಪಡೆದಿಲ್ಲ ಮತ್ತು ಮುಂದೆ ಅವಕಾಶ ಪಡೆಯುವ ಸಾಧ್ಯತೆ ಬಗೆಗಿನ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.
ಕ್ರಿಸ್ ಗೇಲ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಮತ್ತು ಶತಕ ಸಿಡಿಸಿದ ದಾಖಲೆ ಹೊಂದಿರುವ ಸ್ಫೋಟಕ ಬ್ಯಾಟ್ಸ್ಮನ್ ಇವರು. ಆದರೂ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನೂ ಇವರನ್ನು ಕಣಕ್ಕಿಳಿಸದೆ ಇರುವುದು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯಾಗಿ ಕಾಣಿಸುತ್ತಿದೆ. ಆದರೆ ಕಳೆದ ಜನವರಿಯಿಂದಲೂ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡದಿರುವ ಗೇಲ್, ಬ್ಯಾಟಿಂಗ್ ಲಯದಲ್ಲಿ ಇರದೆ ಇರದೆ ಇರುವುದು ಟೀಮ್ ಮ್ಯಾನೇಜ್ಮೆಂಟ್ ಗಮನಕ್ಕೆ ಬಂದಿರಬಹುದು. ಇನ್ನು 41 ವರ್ಷದ ಗೇಲ್ ಫಿಟ್ನೆಸ್ ಸಮಸ್ಯೆಯನ್ನೂ ಹೊಂದಿರಬಹುದು. ಹೀಗಾಗಿ ಅವರಿಗೆ ಯುಎಇಯಲ್ಲಿ ಹೆಚ್ಚಿನ ಅಭ್ಯಾಸಕ್ಕೆ ತಂಡ ಅವಕಾಶ ಕಲ್ಪಿಸಿರಬಹುದು. ತಂಡದಲ್ಲಿ 4 ವಿದೇಶಿ ಆಟಗಾರರ ಕೋಟಾವೂ ಭರ್ತಿಯಾಗಿರುವುದರಿಂದ ಮತ್ತು ಆರಂಭಿಕರಾಗಿ ಕನ್ನಡಿಗರಾದ ಕೆಎಲ್ ರಾಹುಲ್-ಮಯಾಂಕ್ ಅಗರ್ವಾಲ್ ಸೆಟ್ ಆಗಿರುವುದರಿಂದ ಗೇಲ್ಗೆ ಸ್ಥಾನ ಕಲ್ಪಿಸುವುದು ಕಷ್ಟವಾಗಿರಬಹುದು. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ರನ್ಗೆ ಪರದಾಡುತ್ತಿರುವ ಕಾರಣ ಗೇಲ್ ಶೀಘ್ರದಲ್ಲೇ ಅವಕಾಶ ಪಡೆದುಕೊಳ್ಳುವ ನಿರೀಕ್ಷೆ ಇದೆ. ಗುರುವಾರವೇ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ ಆಡಬೇಕಿತ್ತಾದರೂ, ಕಲುಷಿತ ಆಹಾರ ಸೇವನೆಯಿಂದಾಗಿ ಕಣಕ್ಕಿಳಿದಿರಲಿಲ್ಲ.
ಇಶಾನ್ ಪೊರೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಗಮನ ಸೆಳೆದಿದ್ದ ಬಂಗಾಳದ ಲಂಬೂ ವೇಗಿ ಇಶಾನ್ ಪೊರೆಲ್, ಕಳೆದ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ತಂಡ ಸೇರಿದ್ದರು. ಆದರೆ ಇದುವರೆಗೆ ಒಂದೂ ಪಂದ್ಯವಾಡಿಲ್ಲ. ಅನುಭವಿ ವೇಗಿ ಮೊಹಮದ್ ಶಮಿ ಮಿಂಚುತ್ತಿರುವುದರಿಂದ ಮತ್ತು ಶೆಲ್ಡನ್ ಕಾಟ್ರೆಲ್ ಅವರಿಗೆ ಉತ್ತಮ ಸಾಥ್ ನೀಡುತ್ತಿರುವುದರಿಂದ ಪಂಜಾಬ್ ತಂಡ ವೇಗದ ಬೌಲಿಂಗ್ ವಿಭಾಗದಲ್ಲಿ ಸದ್ಯ ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ. ಆದರೆ 22 ವರ್ಷದ ಇಶಾನ್ ಪೊರೆಲ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಅಜಿಂಕ್ಯ ರಹಾನೆ (ಡೆಲ್ಲಿ ಕ್ಯಾಪಿಟಲ್ಸ್)
ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗಾವಣೆಗೊಂಡಿರುವ ಮುಂಬೈ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಇನ್ನೂ ಯಾವುದೇ ಪಂದ್ಯವಾಡಿಲ್ಲ. ಐಪಿಎಲ್ನಲ್ಲಿ ಈ ಹಿಂದೆ 2 ಶತಕಗಳ ಸಹಿತ 4 ಸಾವಿರದ ಸನಿಹ ರನ್ ಪೇರಿಸಿರುವ ಸಾಧಕರಾಗಿದ್ದರೂ ರಹಾನೆ ಡೆಲ್ಲಿ ಬ್ಯಾಟಿಂಗ್ ಬಳಗದಲ್ಲಿರದೆ ಇರುವುದು ಅಭಿಮಾನಿಗಳಿಗೆ ಅಚ್ಚರಿ ಸೃಷ್ಟಿಸಿದೆ. ಆದರೆ ಡೆಲ್ಲಿ ತಂಡದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಹಾನೆಗೆ ಸ್ಥಾನ ಕಲ್ಪಿಸುವುದು ಕಷ್ಟಕರವೆನಿಸಿದೆ. ಶಿಖರ್ ಧವನ್ ಸಹಿತ ಇತರ ಕೆಲ ಬ್ಯಾಟ್ಸ್ಮನ್ಗಳ ವೈಫಲ್ಯ ಮುಂದುವರಿದರೆ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶವೂ ಸಿಗಬಹುದಾಗಿದೆ.
ಇದನ್ನೂ ಓದಿ:ಸಕ್ರಿಯ ರಾಜಕೀಯಕ್ಕೆ ಕುಸ್ತಿತಾರೆ ಬಬಿತಾ ಪೋಗಟ್, ಸರ್ಕಾರಿ ಕೆಲಸಕ್ಕೆ ಗುಡ್ಬೈ
ಕ್ರಿಸ್ ಮಾರಿಸ್ (ಆರ್ಸಿಬಿ)
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 10 ಕೋಟಿ ರೂ. ಮೊತ್ತಕ್ಕೆ ಆರ್ಸಿಬಿ ತಂಡ ಸೇರಿದ್ದರು. ಇವರು ಆಡುವ ಬಳಗದಲ್ಲಿ ಬಂದರೆ ತಂಡಕ್ಕೆ ಉತ್ತಮ ಸಮತೋಲನವೂ ಸಿಗಲಿದೆ. ಆದರೆ ತಂಡದ ಮೊದಲ 5 ಪಂದ್ಯಗಳಲ್ಲಿ ಇವರು ಆಡಿಲ್ಲ. ಇದು ಅಭಿಮಾನಿಗಳಿಗೆ ಅಚ್ಚರಿ ಸೃಷ್ಟಿಸಿದೆ. ಆರ್ಸಿಬಿ ಮೂಲಗಳ ಪ್ರಕಾರ, ಕ್ರಿಸ್ ಮಾರಿಸ್ ಫಿಟ್ನೆಸ್ ಸಮಸ್ಯೆ ಹೊಂದಿರುವುದೇ, ಟೂರ್ನಿಯಲ್ಲಿ ಇದುವರೆಗೆ ಆಡಲು ಇಳಿಯದಿರುವುದಕ್ಕೆ ಕಾರಣವಾಗಿದೆ. ಅವರು ಶೇ. 100ರಷ್ಟು ಫಿಟ್ ಆದ ಬಳಿಕ ಖಂಡಿತವಾಗಿಯೂ ಮೈದಾನಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಪವನ್ ದೇಶಪಾಂಡೆ (ಆರ್ಸಿಬಿ)
ಕೆಪಿಎಲ್ನಲ್ಲಿ ಆಲ್ರೌಂಡ್ ನಿರ್ವಹಣೆಯ ಮೂಲಕ ಗಮನಸೆಳೆದಿರುವ ಧಾರವಾಡದ ಪ್ರತಿಭೆ ಪವನ್ ದೇಶಪಾಂಡೆ. ಕಳೆದ ವರ್ಷದಿಂದ ಆರ್ಸಿಬಿ ತಂಡದಲ್ಲಿದ್ದರೂ, ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಬಾರಿಯೂ ಇದುವರೆಗೆ ಒಂದೂ ಪಂದ್ಯವಾಡಿಲ್ಲ. ಸ್ಫೋಟಕ ಬ್ಯಾಟಿಂಗ್ ಜತೆಗೆ ಉಪಯುಕ್ತ ಸ್ಪಿನ್ ಬೌಲಿಂಗ್ ಮೂಲಕವೂ ನೆರವಾಗಬಲ್ಲರು. ಆದರೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಯಾಕೆ ಇವರನ್ನು ಆಡಿಸುವ ಮನಸ್ಸು ಮಾಡುತ್ತಿಲ್ಲ ಎಂಬ ಪ್ರಶ್ನೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಆರ್ಸಿಬಿ ತಂಡ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಆಟವಾಡುವ ಆಟಗಾರರ ಕೊರತೆ ಹೊಂದಿದ್ದು, ಪವನ್ ದೇಶಪಾಂಡೆ ಈ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೂ ಇವರು ಲೆಕ್ಕಭರ್ತಿಗೆಂಬಂತೆ ತಂಡದಲ್ಲಿರುವುದು ವಿಪರ್ಯಾಸವಾಗಿದೆ.
ಕ್ರಿಸ್ ಲ್ಯಾನ್ (ಮುಂಬೈ ಇಂಡಿಯನ್ಸ್)
ಕಳೆದ ಆವೃತ್ತಿಯವರೆಗೆ ಕೆಕೆಆರ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆರಂಭಿಕ ಕ್ರಿಸ್ ಲ್ಯಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಕಳೆದ ಹರಾಜಿನಲ್ಲಿ 2 ಕೋಟಿ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರೂ ಕ್ರಿಸ್ ಲ್ಯಾನ್ ಟೂರ್ನಿಯಲ್ಲಿ ಇದುವರೆಗೆ ಯಾವುದೇ ಪಂದ್ಯವಾಡಿಲ್ಲ. ಇದು ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದ ನಾಲ್ವರು ವಿದೇಶಿ ಕ್ರಿಕೆಟಿಗರ ಕೋಟಾ ಭರ್ತಿಯಾಗಿರುವುದರಿಂದ ಕ್ರಿಸ್ ಲ್ಯಾನ್ಗೆ ಆಡುವ ಬಳಗದಲ್ಲಿ ಸ್ಥಾನ ಕಲ್ಪಿಸಲು ಕಷ್ಟಕರವಾಗಿದೆ ಎನ್ನಬಹುದು. ಆದರೆ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಮುಂಬೈಗೆ ಸ್ಫೋಟಕ ಆರಂಭದ ಅಗತ್ಯ ಕಂಡಾಗ ಲ್ಯಾನ್ ಖಂಡಿತವಾಗಿಯೂ ಆಡುವ ಅವಕಾಶ ಪಡೆಯಬಹುದು. ಕ್ವಿಂಟನ್ ಡಿಕಾಕ್ ಬ್ಯಾಟಿಂಗ್ನಲ್ಲಿ ಸ್ಥಿರ ನಿರ್ವಹಣೆ ತೋರದಿದ್ದರೆ, ಇಶಾನ್ ಕಿಶನ್ಗೆ ವಿಕೆಟ್ ಕೀಪಿಂಗ್ ಒಪ್ಪಿಸಿ, ಕ್ರಿಸ್ ಲ್ಯಾಸ್ಗೆ ಆಡುವ ಬಳಗದಲ್ಲಿ ಸ್ಥಾನ ಕಲ್ಪಿಸಬಹುದಾಗಿದೆ.
ಮಿಚೆಲ್ ಮೆಕ್ಲೀನಘನ್ (ಮುಂಬೈ ಇಂಡಿಯನ್ಸ್)
ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಪರ ಉತ್ತಮ ನಿರ್ವಹಣೆ ತೋರಿದ್ದ ನ್ಯೂಜಿಲೆಂಡ್ ಆಲ್ರೌಂಡರ್ ಮಿಚೆಲ್ ಮೆಕ್ಲೀನಘನ್ ಟೂರ್ನಿಯಲ್ಲಿ ಇದುವರೆಗೆ ಯಾವುದೇ ಪಂದ್ಯವಾಡಿಲ್ಲ. ಕಿವೀಸ್ನವರೇ ಆದ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಆಸ್ಟ್ರೇಲಿಯಾದ ಜೇಮ್ಸ್ ಪ್ಯಾಟಿನ್ಸನ್ ಉತ್ತಮ ನಿರ್ವಹಣೆ ತೋರುತ್ತಿರುವುದರಿಂದ ಈ ಬಾರಿ ಸದ್ಯಕ್ಕೆ ಮುಂಬೈಗೆ ಮೆಕ್ಲೀನಘನ್ ಅಗತ್ಯ ಬಿದ್ದಿಲ್ಲ. ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗವನ್ನೂ ಬಲಪಡಿಸಬೇಕೆಂದಾದರೆ ಮೆಕ್ಲೀನಘನ್ ಅವಕಾಶ ಗಿಟ್ಟಿಸಿಕೊಳ್ಳಬಹುದು.
ಟಾಮ್ ಬ್ಯಾಂಟನ್ (ಕೋಲ್ಕತ ನೈಟ್ರೈಡರ್ಸ್)
ಇಂಗ್ಲೆಂಡ್ನ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ಟಾಮ್ ಬ್ಯಾಂಟನ್ ಈಗಾಗಲೆ ಬಿಗ್ ಬಾಷ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಡಿ ಗಮನಸೆಳೆದಿದ್ದಾರೆ. 21 ವರ್ಷದ ಬ್ಯಾಂಟನ್ ಕೂಡ ದಕ್ಷಿಣ ಆಫ್ರಿಕಾ ಮೂಲದವರಾಗಿರುವುದರಿಂದ ಕೆವಿನ್ ಪೀಟರ್ಸೆನ್ ಜತೆಗೂ ಹೋಲಿಕೆ ಪಡೆದುಕೊಂಡಿದ್ದಾರೆ. ಕಳೆದ ಹರಾಜಿನಲ್ಲಿ 1 ಕೋಟಿ ರೂ. ಮೊತ್ತಕ್ಕೆ ಕೆಕೆಆರ್ ತಂಡ ಸೇರಿದ್ದರೂ ಯಾವುದೇ ಪಂದ್ಯವಾಡುವ ಅವಕಾಶ ಪಡೆದಿಲ್ಲ. ಸದ್ಯ ಕೆಕೆಆರ್ ತಂಡದ ಆರಂಭಿಕ ಜೋಡಿಯ ವೈಲ್ಯವನ್ನು ರಾಹುಲ್ ತ್ರಿಪಾಠಿ ನೀಗಿಸಿದ್ದಾರೆ. ಅಲ್ಲದೆ ನಾಯಕ ದಿನೇಶ್ ಕಾರ್ತಿಕ್ ಅವರೇ ವಿಕೆಟ್ ಕೀಪರ್ ಆಗಿದ್ದಾರೆ. ಹೀಗಾಗಿ ಟಾಮ್ ಬ್ಯಾಂಟನ್ ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯುವ ಬಗ್ಗೆ ಸ್ಪಷ್ಟತೆ ಕಾಣಿಸುತ್ತಿಲ್ಲ.
ಲಾಕಿ ಫರ್ಗ್ಯುಸನ್ (ಕೋಲ್ಕತ ನೈಟ್ರೈಡರ್ಸ್)
ಕಳೆದ ಐಪಿಎಲ್ ಹರಾಜಿನಲ್ಲಿ 1.60 ಕೋಟಿ ರೂ. ಮೊತ್ತಕ್ಕೆ ಕೆಕೆಆರ್ ತಂಡ ಸೇರಿದ್ದ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯುಸನ್, 5 ಪಂದ್ಯಗಳಲ್ಲಿ ಆಡಿದ್ದರು. ಆದರೆ ಈ ಬಾರಿ ಇದುವರೆಗೆ ಒಂದೂ ಅವಕಾಶ ಪಡೆದಿಲ್ಲ. ಇದಕ್ಕೆ ಕಾರಣ, ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂ. ಮೊತ್ತಕ್ಕೆ ತಂಡ ಸೇರಿರುವುದು. ಇದರಿಂದ ಆಡುವ ಬಳಗದಲ್ಲಿ ವಿದೇಶಿ ವೇಗದ ಬೌಲರ್ ಸ್ಥಾನ ಭರ್ತಿಯಾಗಿದೆ. ಕಮ್ಮಿನ್ಸ್ ಆರಂಭದಲ್ಲಿ ವೈಫಲ್ಯ ಕಂಡರೂ ಈಗ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಇದರಿಂದ ಫರ್ಗ್ಯುಸನ್ ಸದ್ಯಕ್ಕೆ ಬೆಂಚ್ ಕಾಯಿಸುವುದು ಅನಿವಾರ್ಯವಾಗಿದೆ.
ಪ್ರಸಿದ್ಧ ಕೃಷ್ಣ (ಕೋಲ್ಕತ ನೈಟ್ರೈಡರ್ಸ್)
ಕರ್ನಾಟಕದ ಭರವಸೆಯ ಯುವ ವೇಗಿ ಪ್ರಸಿದ್ಧ ಕೃಷ್ಣ ಕಳೆದ ಕೆಲ ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದು, ಕಳೆದ 2 ವರ್ಷಗಳಲ್ಲಿ ಕೆಕೆಆರ್ ತಂಡದ ಪರವಾಗಿಯೂ ಮಿಂಚಿದ್ದರು. ಅದರೂ ಈ ಬಾರಿ ಇದುವರೆಗೆ ಒಂದೂ ಪಂದ್ಯವಾಡಿಲ್ಲ. ಗಾಯದಿಂದ ಚೇತರಿಸಿ ಮರಳಿರುವ ಮತ್ತಿಬ್ಬರು ಯುವ ವೇಗಿಗಳಾದ ಶಿವಂ ಮಾವಿ ಮತ್ತು ಕಮಲೇಶ್ ನಾಗರಕೋಟಿ ಮಿಂಚುತ್ತಿರುವುದು ಪ್ರಸಿದ್ಧಕೃಷ್ಣ ತಂಡದಲ್ಲಿ ಸ್ಥಾನ ಪಡೆಯಲು ಅಡ್ಡಿಯಾಗಿದೆ. ಇವರಿಬ್ಬರಲ್ಲಿ ಒಬ್ಬರಾದರೂ ಮುಂದಿನ ಪಂದ್ಯಗಳಲ್ಲಿ ಲಯ ತಪ್ಪಿದರೆ ಅಥವಾ ಮತ್ತೆ ಫಿಟ್ನೆಸ್ ಸವಸ್ಯೆ ಎದುರಿಸಿದರೆ ಪ್ರಸಿದ್ಧ ಕೃಷ್ಣ ಮರಳಿ ಅವಕಾಶ ಗಿಟ್ಟಿಕೊಳ್ಳಬಹುದಾಗಿದೆ.
ಇಮ್ರಾನ್ ತಾಹಿರ್ (ಚೆನ್ನೈ ಸೂಪರ್ಕಿಂಗ್ಸ್)
ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ ಉತ್ತಮ ಲಯದಲ್ಲಿರುವ ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್. ಆದರೆ ಚೆನ್ನೈ ಸೂಪರ್ಕಿಂಗ್ಸ್ ತಂಡದಲ್ಲಿ ಅವರಿನ್ನೂ ಯಾವುದೇ ಪಂದ್ಯವಾಡಿಲ್ಲ. ಕಳೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ 41 ವರ್ಷದ ತಾಹಿರ್ ಉತ್ತಮ ನಿರ್ವಹಣೆ ತೋರಿದ್ದರು. ಆದರೆ ಸಿಎಸ್ಕೆ ತಂಡದಲ್ಲಿ ಸದ್ಯ ವಿದೇಶಿ ಕೋಟಾ ಭರ್ತಿಯಾಗಿದೆ. ವ್ಯಾಟ್ಸನ್, ಪ್ಲೆಸಿಸ್, ಬ್ರಾವೊ ಮತ್ತು ಸ್ಯಾಮ್ ಕರ್ರನ್ ಮಿಂಚುತ್ತಿದ್ದಾರೆ. ಆದರೆ ಮತ್ತೊಂದೆಡೆ ಸಿಎಸ್ಕೆ ಸ್ಪಿನ್ ವಿಭಾಗ ಈ ಬಾರಿ ಹಿಂದಿನಂತೆ ಮಿಂಚಿಲ್ಲ. ಹರ್ಭಜನ್ ಗೈರಿನಲ್ಲಿ ಪೀಯುಷ್ ಚಾವ್ಲ ಸಾಧಾರಣ ನಿರ್ವಹಣೆ ತೋರಿದ್ದಾರೆ. ಹೀಗಾಗಿ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ತಾಹಿರ್, ತಂಡದ ಸ್ಪಿನ್ ಬಲ ಹೆಚ್ಚಿಸಲು ಅವಕಾಶ ಪಡೆಯುವ ನಿರೀಕ್ಷೆಯೂ ಇದೆ.
ಜೇಸನ್ ಹೋಲ್ಡರ್ (ಸನ್ರೈಸರ್ಸ್ ಹೈದರಾಬಾದ್)
ವಿಶ್ವ ನಂ. 1 ಆಲ್ರೌಂಡರ್ ಎನಿಸಿದ್ದ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಟರ್, ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಮೊದಲ ಪಂದ್ಯದಲ್ಲೇ ಗಾಯಗೊಂಡ ಬಳಿಕ ಸನ್ರೈಸರ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಯುಎಇಯಲ್ಲಿ ಕ್ವಾರಂಟೈನ್ ಮುಗಿಸಿದ್ದರೂ, ಇದುವರೆಗೆ ಒಂದೂ ಪಂದ್ಯವಾಡುವ ಅವಕಾಶ ಪಡೆದಿಲ್ಲ. ಕೇನ್ ವಿಲಿಯಮ್ಸನ್ ಫಿಟ್ ಆಗಿ ತಂಡಕ್ಕೆ ಮರಳಿರುವುದರಿಂದ ಸನ್ರೈಸರ್ಸ್ ತಂಡಕ್ಕೆ ವಿದೇಶಿ ಕೋಟಾದಲ್ಲಿ ಹೋಲ್ಡರ್ರನ್ನು ಆಡಿಸಲು ಸ್ಥಾನ ಇಲ್ಲದಂತಾಗಿದೆ. ಸ್ಪಿನ್ನರ್ ರಶೀದ್ ಖಾನ್ ಜತೆಗೆ ನಾಯಕ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೋ ಕೂಡ ವಿದೇಶಿ ಕೋಟಾ ಭರ್ತಿ ಮಾಡಿದ್ದಾರೆ. ಹೀಗಾಗಿ ಹೋಲ್ಡರ್ ಅವಕಾಶ ಇನ್ನೂ ಹೋಲ್ಡ್ನಲ್ಲಿರುವಂತಾಗಿದೆ.
ಆಂಡ್ರೋ ಟೈ (ರಾಜಸ್ಥಾನ ರಾಯಲ್ಸ್)
ಆಸ್ಟ್ರೇಲಿಯಾದ ವೇಗಿ ಆಂಡ್ರೋ ಟೈ ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ 2 ಬಾರಿ ಹ್ಯಾಟ್ರಿಕ್ ಸಾಧಿಸಿದ ಅಪರೂಪದ ಸಾಧನೆ ಹೊಂದಿದ್ದಾರೆ. ಐಪಿಎಲ್ನಲ್ಲೂ ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಪರ ಉತ್ತಮ ನಿರ್ವಹಣೆ ತೋರಿದ್ದರು. ಕಳೆದ ಐಪಿಎಲ್ ಹರಾಜಿನಲ್ಲಿ 1 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮರಳಿದ್ದರು. ಆದರೆ ಇದುವರೆಗೆ ಆಡುವ ಅವಕಾಶ ಪಡೆದಿಲ್ಲ. ಇದಕ್ಕೆ ತಂಡದಲ್ಲಿ ವೇಗದ ಬೌಲರ್ನ ವಿದೇಶಿ ಕೋಟಾವನ್ನು ಇಂಗ್ಲೆಂಡ್ನ ಟಾಮ್ ಕರ್ರನ್ ತುಂಬಿರುವುದು ಕಾರಣವಾಗಿದೆ. ಕರ್ರನ್ ಬ್ಯಾಟಿಂಗ್ನಲ್ಲೂ ಉಪಯುಕ್ತರಾಗಿದ್ದಾರೆ. ಇದರಿಂದಾಗಿ ಟೈ ಅವಕಾಶ ವಂಚಿತರಾಗಿದ್ದಾರೆ. ವೇಗದ ಬೌಲಿಂಗ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ತಂಡಕ್ಕೆ ಮರಳುತ್ತಿರುವುದರಿಂದಾಗಿ ಆಂಡ್ರೋ ಟೈ ಟೂರ್ನಿ ಮುಂದಿನ ಪಂದ್ಯಗಳಲ್ಲೂ ಅವಕಾಶ ಪಡೆದುಕೊಳ್ಳುವುದು ಅನುಮಾನವೆನಿಸಿದೆ.
ಫ್ರೆಂಚ್ ಓಪನ್ನಲ್ಲಿ ಡೇನಿಯಲ್ ಕಾಲಿನ್ಸ್ ಸೋಲಿಗೆ ಬಾಯ್ಫ್ರೆಂಡ್ ಕಾರಣ!