ನವಲಗುಂದ: ತಾಲೂಕಿನಾದ್ಯಂತ ಹೊಲಗಳ ರಸ್ತೆಗಳು, ರಾಜ್ಯ ಹೆದ್ದಾರಿಗಳು ಹದಗೆಟ್ಟಿವೆ. ಅವುಗಳನ್ನು ಶಾಶ್ವತ ರಸ್ತೆಗಳನ್ನಾಗಿ ನಿರ್ವಿುಸಬೇಕು. ಕೆರೆಗಳ ನೀರು ಮಲಿನಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಬಹುತೇಕ ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಹಳ್ಳಿಗರ ಪಾಡು ಹೇಳತೀರದಾಗಿದೆ. ಎಲ್ಲ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಾಪಂ ಅಧ್ಯಕ್ಷೆ ಅನ್ನಪೂರ್ಣಾ ಶಿರಹಟ್ಟಿಮಠ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಕರೊನಾದಿಂದ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಧಿಕಾರಿಗಳು ಬೆರಳೆಣಿಕೆಯಷ್ಟು ಯೋಜನೆಗಳ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದ್ದ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ನೆರೆಯಿಂದಾದ ಬೆಳೆ ಹಾಗೂ ಮನೆಗಳ ಹಾನಿಗೆ ಪರಿಹಾರ ಹಾಗೂ ಬೆಳೆ ವಿಮೆ ಹಣ ಬಿಡುಗಡೆಯಾಗಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಜನರಿಗೆ ಪರಿಹಾರ ದೊರಕಿಸಬೇಕು ಎಂದರು.
ಜಿಪಂ ಉಪವಿಭಾಗದ ಎಇಇ ಕೆ. ಚಾಟಿ ಮಾತನಾಡಿ, ಕಳೆದ ವರ್ಷ ವಿವಿಧ ಯೋಜನೆಗಳಡಿ ರಸ್ತೆ ಕಾಮಗಾರಿಗಳು ಅನುದಾನ ಬಾರದೆ ವಿಳಂಬಗೊಂಡಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಆಗ ಅಧ್ಯಕ್ಷರು, ಸ್ಥಗಿತಗೊಂಡ ಎಲ್ಲ ಯೋಜನೆಗಳ ಕಾಮಗಾರಿಗಳನ್ನು ಮರಳಿ ಕೈಗೊಳ್ಳುವಂತೆ ಸೂಚಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಯಮನೂರ ತಾಪಂ ಕ್ಷೇತ್ರದ ಸದಸ್ಯೆ ನಿಂಗವ್ವ ಬಾರಕೇರ ಅವರನ್ನು ತಾಪಂ ಸದಸ್ಯರು, ಅಧಿಕಾರಿಗಳು ಸನ್ಮಾನಿಸಿದರು.
ತಾಪಂ ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಸದಸ್ಯರಾದ ಬಸವರಾಜ ನರಗುಂದ, ಶಾಂತವ್ವ ಚುಳಕಿ, ತಾಪಂ ಇಒ ಎಸ್.ಎಂ. ಕಾಂಬಳೆ, ಕೃಷಿ ಸಹಾಯಕ ನಿರ್ದೇಶಕ ಶ್ರೀನಾಥ ಚಿಮ್ಮಲಗಿ, ಸಿ.ಬಿ. ಭದ್ರಾಪುರ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನ್ನಕೇರಿ, ಪಶು ಇಲಾಖೆ ತಾಲೂಕು ಅಧಿಕಾರಿ ಕೆ.ಎಚ್. ಕ್ಯಾದಡ, ಸಿಡಿಪಿಒ ವಿಜಯಲಕ್ಷ್ಮೀ ಪಾಟೀಲ, ಇತರರಿದ್ದರು.