ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ 9 ಉಗ್ರರನ್ನು ಹೊಡೆದುರುಳಿಸಿರುವುದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ. ನಾಲ್ವರು ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದ್ದರೆ, ಭಾನುವಾರ ಐವರು ಉಗ್ರರನ್ನು ಹತ್ಯೆ ಮಾಡಲಾಯಿತು ಎಂದು ಹೇಳಿವೆ. ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ನಡೆದ ಈ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಯ ಹಲವು ಸಿಬ್ಬಂದಿ ಗಾಯಗೊಂಡಿದ್ದರು. ಅವರೆಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರು ಯೋಧರು ಭಾನುವಾರ ಹುತಾತ್ಮರಾದರು. ಇನ್ನುಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ವಿಭಾಗದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಶನಿವಾರ ನಾಲ್ವರು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದರು. ನಿಖರ ಮಾಹಿತಿ ದೊರೆತ ಬಳಿಕ ಭದ್ರತಾ ಪಡೆ ಸಿಬ್ಬಂದಿ ಮುಂಜಾನೆ 5.45ರಿಂದ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದ ಕಾರಣ ಭದ್ರತಾಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎನ್ನಲಾಗಿದೆ.
ಶನಿವಾರ ರಾತ್ರಿಯ ಕಾರ್ಯಾಚರಣೆಯಲ್ಲಿ ಕುಲ್ಗಾಂನ ಶಾಹೀದ್ ಸಾಧಿಕ್ ಮಲಿಕ್, ಅನಂತನಾಗ್ನ ಮೊಹಮ್ಮದ್ ಅಶ್ರಫ್ ಮಲಿಕ್, ಹನನ್ ಚಾವಲ್ಗಾಂನ ವಕಾರ್ ಫಾರೂಕ್ ಹತ ಉಗ್ರರು. ಮತ್ತೊಬ್ಬ ಉಗ್ರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಭಾನುವಾರದ ಕಾರ್ಯಾಚರಣೆಯಲ್ಲಿ ಹತರಾಗಿರುವ ಉಗ್ರರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಸೇನಾಪಡೆ ಮೂಲಗಳು ಹೇಳಿವೆ.
ನನ್ನ ಹಣೆಬರಹ ಅಲ್ಲಾಹ್ನ ಕೈಯಲ್ಲಿದೆ ಎಂದವನ ಸಾವು: ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದ ದಕ್ಷಿಣ ಆಫ್ರಿಕಾದ ವ್ಯಕ್ತಿ