ಬೆಂಗಳೂರು: ಜಗತ್ತಿಗೆಲ್ಲ ಕ್ರಿಕೆಟ್ ಜ್ವರ ಹರಡುವ ಏಕದಿನ ವಿಶ್ವಕಪ್ ಮತ್ತೆ ಬರುತ್ತಿದೆ. ಈ ಬಾರಿ ಮತ್ತೆ ಭಾರತವೇ ವಿಶ್ವಕಪ್ಗೆ ಆತಿಥ್ಯ ವಹಿಸುತ್ತಿದೆ. ಈ ಹಿಂದೆ 3 ಬಾರಿ ಯಶಸ್ವಿಯಾಗಿ ವಿಶ್ವಕಪ್ ಆತಿಥ್ಯ ವಹಿಸಿದ ಅನುಭವ ಭಾರತಕ್ಕಿದ್ದರೂ, ಆಗ ಉಪಖಂಡದ ಇತರ ದೇಶಗಳ ಸಾಥ್ ದೊರೆತಿತ್ತು. ಈ ಬಾರಿ ಭಾರತ ಏಕಾಂಗಿಯಾಗಿಯೇ ವಿಶ್ವಕಪ್ ಆಯೋಜಿಸುವ ಸವಾಲು ಹೊಂದಿದ್ದು, ತನ್ನ ಕ್ರಿಕೆಟ್ ಶ್ರೀಮಂತಿಕೆಯ ಅನಾವರಣಕ್ಕೆ ಸಿದ್ಧಗೊಂಡಿದೆ. ದೇಶದ 10 ತಾಣಗಳಲ್ಲಿ 46 ದಿನಗಳಲ್ಲಿ 48 ಪಂದ್ಯಗಳು ಆಯೋಜನೆಗೊಳ್ಳಲಿದ್ದು, ಆತಿಥೇಯ ಭಾರತ 3ನೇ ಬಾರಿ ವಿಶ್ವಕಪ್ ಗೆಲ್ಲುವ ಕನಸಿನಲ್ಲಿದೆ. ಈ ಸಮಯದಲ್ಲಿ ಭಾರತದಲ್ಲಿನ ಹಿಂದಿನ 3 ವಿಶ್ವಕಪ್ಗಳ ಮೆಲುಕು ಇಲ್ಲಿದೆ…
1987ರಲ್ಲಿ ಮೊದಲ ವಿಶ್ವಕಪ್ ಆತಿಥ್ಯ
ಭಾರತ ಈಗ ಕ್ರಿಕೆಟ್ನಲ್ಲಿ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್ ಗೆಲುವು ಯಾವ ರೀತಿ ಕಾರಣವೋ, ಅಷ್ಟೇ 1987ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯೂ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. 1987ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್ನಿಂದ ಹೊರಗೆ ವಿಶ್ವಕಪ್ ಆಯೋಜನೆಗೊಂಡಿತು. 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಬಿಸಿಸಿಐ ಅಧ್ಯರಾಗಿದ್ದ ಎನ್ಕೆಪಿ ಸಾಳ್ವೆ ಅವರು 1987ರಲ್ಲಿ ಭಾರತಕ್ಕೆ ವಿಶ್ವಕಪ್ ಆತಿಥ್ಯ ಒಲಿದುಬರಲು ಪ್ರಮುಖ ಕಾರಣ. 1983ರ ವಿಶ್ವಕಪ್ ಪಂದ್ಯದ 2 ಹೆಚ್ಚುವರಿ ಟಿಕೆಟ್ಗಳನ್ನು ಕೇಳಿದಾಗ ಆಂಗ್ಲರು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಸಾಳ್ವೆ ವಿಶ್ವಕಪ್ ಆತಿಥ್ಯವನ್ನೇ ಆಂಗ್ಲರಿಂದ ಕಿತ್ತುಕೊಳ್ಳಲು ಮುಂದಾದರು. ಇದಕ್ಕೆ ಪಾಕಿಸ್ತಾನವೂ ಅವರಿಗೆ ಬೆಂಬಲವಾಗಿ ನಿಂತಿತು. ಚತುರ ಕ್ರಿಕೆಟ್ ಆಡಳಿತಗಾರರಾದ ಐಎಸ್ ಬಿಂದ್ರಾ ಮತ್ತು ಜಗಮೋಹನ್ ದಾಲ್ಮಿಯಾ ಕೂಡ ಭಾರತ ಯಶಸ್ವಿ ವಿಶ್ವಕಪ್ ಆಯೋಜನೆಯ ರೂವಾರಿಗಳಾಗಿದ್ದರು. ರಿಲಯನ್ಸ್ ಪ್ರಮುಖ ಪ್ರಾಯೋಜಕನಾಗಿ ಸಾಥ್ ನೀಡಿದ್ದರಿಂದ ಭಾರತ-ಪಾಕ್ ಜಂಟಿಯಾಗಿ ಆಗ 32 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್ ಸಂಟಿಸಿತ್ತು. ಇಂಗ್ಲೆಂಡ್ನಲ್ಲಿ ಹಗಲು ಹೆಚ್ಚಿನ ಸಮಯ ಇರುವುದರಿಂದ ಮೊದಲ 3 ವಿಶ್ವಕಪ್ನಲ್ಲಿ ತಲಾ 60 ಓವರ್ಗಳ ಪಂದ್ಯ ನಡೆದಿದ್ದರೆ, 1987ರಲ್ಲಿ ಅದನ್ನು ಮೊದಲ ಬಾರಿ 50 ಓವರ್ಗಳಿಗೆ ಇಳಿಸಲಾಯಿತು. ಭಾರತದ 14 ಮತ್ತು ಪಾಕಿಸ್ತಾನದ 7 ಸೇರಿದಂತೆ ಒಟ್ಟು 21 ಕ್ರೀಡಾಂಗಣಗಳಲ್ಲಿ ಟೂರ್ನಿಯ 27 ಪಂದ್ಯಗಳು ನಡೆದವು. 8 ತಂಡಗಳ ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ ಸೆಮೀಸ್ನಲ್ಲೇ ಹೊರಬಿದ್ದರೆ, ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಆಸ್ಟ್ರೆಲಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
1996ರಲ್ಲಿ 2ನೇ ಬಾರಿ ಆಯೋಜನೆ
1992ರ ವಿಶ್ವಕಪ್ ಟೂರ್ನಿ ಆಸ್ಟ್ರೆಲಿಯಾದಲ್ಲಿ ನಡೆದ ಬಳಿಕ ಇಂಗ್ಲೆಂಡ್ 1996ರಲ್ಲಿ ವಿಶ್ವಕಪ್ ಮತ್ತೆ ತನ್ನ ನೆಲಕ್ಕೆ ಮರಳುತ್ತದೆ ಎಂಬ ನಿರೀಕ್ಷೆ ಇಂಗ್ಲೆಂಡ್ನದ್ದಾಗಿತ್ತು. ಆದರೆ ಭಾರತ ಈ ಸಲವೂ ಅವಕಾಶ ಬಿಟ್ಟುಕೊಡಲಿಲ್ಲ. ಭಾರತ, ಪಾಕಿಸ್ತಾನದ ಜತೆಗೆ ಈ ಬಾರಿ ಶ್ರೀಲಂಕಾವೂ ವಿಶ್ವಕಪ್ ಆತಿಥ್ಯಕ್ಕೆ ಕೈಜೋಡಿಸಿತು. ವಿಲ್ಸ್ 12 ದಶಲಕ್ಷ ಡಾಲರ್ ನೀಡಿ ಪ್ರಮುಖ ಪ್ರಾಯೋಜಕನಾದರೆ, ಮೊದಲ ಬಾರಿಗೆ ಟೂರ್ನಿಯ ಟಿವಿ ಪ್ರಸಾರ ಹಕ್ಕು 14 ದಶಲಕ್ಷ ಡಾಲರ್ ಮೊತ್ತಕ್ಕೆ ಮಾರಾಟವಾಯಿತು. ಕೋಕಕೋಲ ಕಂಪನಿ ಕೂಡ 3.8 ದಶಲಕ್ಷ ಡಾಲರ್ ನೀಡಿ ಟೂರ್ನಿಯ ಅಧಿಕೃತ ಪಾನೀಯ ಪ್ರಾಯೋಜನಾಯಿತು. ಆಗ ಜಿಂಬಾಬ್ವೆ 9ನೇ ಟೆಸ್ಟ್ ಮಾನ್ಯತೆಯ ದೇಶವಾಗಿದ್ದರೆ, ಅಸೋಸಿಯೇಟ್ ದೇಶಗಳಾದ ನೆದರ್ಲೆಂಡ್, ಯುಎಇ, ಕೀನ್ಯಾ ಸೇರ್ಪಡೆಯೊಂದಿಗೆ 12 ತಂಡಗಳ ವಿಶ್ವಕಪ್ ಆಗಿ ಮಾರ್ಪಟ್ಟಿತು. 37 ಪಂದ್ಯಗಳ ಟೂರ್ನಿಯಲ್ಲಿ ಭಾರತ, 17 ಪಂದ್ಯಗಳಿಗೆ 17 ಕ್ರೀಡಾಂಗಣಗಳಲ್ಲಿ ಆತಿಥ್ಯ ವಹಿಸಿದರೆ, ಪಾಕಿಸ್ತಾನದ 6 ತಾಣಗಳಲ್ಲಿ 16 ಮತ್ತು ಶ್ರೀಲಂಕಾದ 3 ಕ್ರೀಡಾಂಗಣಗಳಲ್ಲಿ 4 ಪಂದ್ಯಗಳು ನಡೆದವು. ಆದರೆ ಆಸ್ಟ್ರೆಲಿಯಾ ಮತ್ತು ವೆಸ್ಟ್ ಇಂಡೀಸ್ ಭದ್ರತಾ ಕಾರಣ ನೀಡಿ ಶ್ರೀಲಂಕಾದಲ್ಲಿ ಆಡಲಿಲ್ಲ ಮತ್ತು ಆ ಪಂದ್ಯಗಳ ಅಂಕವನ್ನು ಶ್ರೀಲಂಕಾಕ್ಕೆ ನೀಡಲಾಯಿತು. ಕ್ವಾರ್ಟರ್ಫೈನಲ್ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ, ಸೆಮಿಫೈನಲ್ನಲ್ಲಿ ಶ್ರೀಲಂಕಾಕ್ಕೆ ಶರಣಾಯಿತು. ಹೀಗೆ ಆತಿಥೇಯ ದೇಶಗಳೇ ಪರಸ್ಪರರನ್ನು ಹೊರದಬ್ಬಿದವು. ಅಂತಿಮವಾಗಿ ಲಾಹೋರ್ನಲ್ಲಿ ನಡೆದ ಫೈನಲ್ನಲ್ಲಿ ಆಸ್ಟ್ರೆಲಿಯಾವನ್ನು ಮಣಿಸಿ ಶ್ರೀಲಂಕಾ ವಿಶ್ವಕಪ್ ಗೆದ್ದು ಬೀಗಿತು. ಅರ್ಜುನ್ ರಣತುಂಗ ಸಾರಥ್ಯದಲ್ಲಿ ಸನತ್ ಜಯಸೂರ್ಯ-ಕಲುವಿತರಣ ಜೋಡಿಯ ಆರಂಭಿಕ ಆರ್ಭಟದಿಂದ ಆಗ ಏಕದಿನ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿಯೇ ಸೃಷ್ಟಿಯಾಗಿತ್ತು.
2011ರಲ್ಲಿ ಆತಿಥ್ಯದ ಜತೆ ಟ್ರೋಫಿ ಗೆಲುವು
ಹತ್ತನೇ ಆವೃತ್ತಿಯ ವಿಶ್ವಕಪ್ಗೆ ಆತಿಥ್ಯ ವಹಿಸುವ ವೇಳೆ ಭಾರತ ಕ್ರಿಕೆಟ್ನಲ್ಲಿ ಶ್ರೀಮಂತವಾಗಿ ಬೆಳೆದುನಿಂತಿತ್ತು. ಆದರೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯದ ನೋವು 28 ವರ್ಷಗಳಿಂದಲೂ ಕಾಡುತ್ತಿತ್ತು. 3ನೇ ಬಾರಿ ಯಶಸ್ವಿ ವಿಶ್ವಕಪ್ ಆಯೋಜನೆಯ ಜತೆಗೆ ಎಂಎಸ್ ಧೋನಿ ಸಾರಥ್ಯದ ತಂಡ ಆ ಕೊರತೆಯನ್ನೂ ನೀಗಿಸಿಬಿಟ್ಟಿತು ಮತ್ತು ದಿಗ್ಗಜ ಸಚಿನ್ ತೆಂಡುಲ್ಕರ್ಗೆ 6ನೇ ಪ್ರಯತ್ನದಲ್ಲಿ ವಿಶ್ವಕಪ್ ಟ್ರೋಫಿ ಒಲಿದುಬಿಟ್ಟಿತು. ಭಾರತ, ಪಾಕ್, ಲಂಕಾ ಜತೆಗೆ ಈ ಬಾರಿ ಬಾಂಗ್ಲಾದೇಶವೂ ವಿಶ್ವಕಪ್ಗೆ ಜಂಟಿ ಆತಿಥ್ಯದ ಬಿಡ್ ಗೆದ್ದುಕೊಂಡಿತು. ಆದರೆ 2008ರಲ್ಲಿ ಲಾಹೋರ್ನಲ್ಲಿ ಲಂಕಾ ತಂಡದ ಮೇಲೆ ನಡೆದ ಉಗ್ರರ ದಾಳಿಯಿಂದಾಗಿ ಪಾಕಿಸ್ತಾನ, ಆತಿಥ್ಯದಿಂದ ಹೊರಬಿದ್ದಿತು. ಭಾರತದ 8, ಶ್ರೀಲಂಕಾದ 3, ಬಾಂಗ್ಲಾದ 2 ಕ್ರೀಡಾಂಗಣಗಳಲ್ಲಿ ಒಟ್ಟು 49 ಪಂದ್ಯಗಳು ಆಯೋಜನೆಗೊಂಡವು. ತಂಡಗಳ ಸಂಖ್ಯೆ 14ಕ್ಕೇರಿದರೂ, 1996ರ ಸ್ವರೂಪದಲ್ಲೇ ಟೂರ್ನಿ ನಡೆಸಲಾಯಿತು. ಕ್ವಾರ್ಟರ್ಫೈನಲ್ನಲ್ಲಿ ಆಸ್ಟ್ರೆಲಿಯಾ, ಸೆಮಿಫೈನಲ್ನಲ್ಲಿ ಪಾಕಿಸ್ತಾನ ಮತ್ತು ಫೈನಲ್ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ 2ನೇ ಬಾರಿ ಪ್ರಶಸ್ತಿ ಗೆದ್ದಿತು. ಜತೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲೇ ಪ್ರಶಸ್ತಿ ಎತ್ತಿ ಹಿಡಿದ ಭಾರತ, ತವರಿನಲ್ಲೇ ವಿಶ್ವಕಪ್ ಗೆದ್ದ ಮೊದಲ ತಂಡವೆನಿಸಿತು.
2023ರಲ್ಲಿ ದೇಶದ ಆರ್ಥಿಕತೆಗೆ 13,500 ಕೋಟಿ ರೂ. ಕೊಡುಗೆ
ಈ ಸಲದ ವಿಶ್ವಕಪ್ ಟೂರ್ನಿಯ ಆಯೋಜನೆಯೂ ಭಾರತದ ಆರ್ಥಿಕತೆಗೆ ಬರೋಬ್ಬರಿ 13,500 ಕೋಟಿ ರೂ. ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ದೇಶದ 10 ತಾಣಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದು, ಎಲ್ಲ ಪಂದ್ಯಗಳ ಟಿಕೆಟ್ಗಳು ಈಗಾಗಲೆ ಬಹುತೇಕ ಸೋಲ್ಡ್ಔಟ್ ಆಗಿವೆ. ಇದರಿಂದಾಗಿ ಟೂರ್ನಿಯ ವೇಳೆ ಪ್ರವಾಸಿಗರ ಹೆಚ್ಚಾಗಿರಲಿದ್ದು, ಪಂದ್ಯ ನಡೆಯುವ 10 ನಗರಗಳಲ್ಲಿ ವಿಮಾನ ಟಿಕೆಟ್, ಹೋಟೆಲ್ ರೂಮ್ಗಳು ಈಗಾಗಲೆ ದುಬಾರಿಯಾಗಿವೆ. ಪ್ರತಿ ಕ್ರೀಡಾಂಗಣದ ನವೀಕರಣಕ್ಕೆ ಬಿಸಿಸಿಐ ತಲಾ 50 ಕೋಟಿ ರೂ.ನಂತೆ ಒಟ್ಟು 500 ಕೋಟಿ ರೂ. ವ್ಯಯಿಸಿದೆ. ಇನ್ನು ಕೇಂದ್ರ ಸರ್ಕಾರ ವಿಶ್ವಕಪ್ಗೆ ತೆರಿಗೆ ವಿನಾಯಿತಿ ನೀಡದಿರುವುದರಿಂದ, ಸುಮಾರು 955 ಕೋಟಿ ರೂ.ನಷ್ಟು ತೆರಿಗೆಯನ್ನು ಐಸಿಸಿಗೆ ಬದಲಾಗಿ ಆತಿಥೇಯ ಬಿಸಿಸಿಐಯೇ ಪಾವತಿಸಬೇಕಾಗಿದೆ.
VIDEO: ಇಶ್ ಸೋಧಿ ರನೌಟ್ ಮಾಡಿ ವಾಪಸ್ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!