ಹೈದರಾಬಾದ್: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕದ್ದುಮುಚ್ಚಿ ಮದ್ಯ ಮಾರಾಟ ಮಾಡುವವರನ್ನು ಪತ್ತೆ ಮಾಡಿ ಬಂಧಿಸುತ್ತಿದುದಲ್ಲದೆ, ಮದ್ಯದ ಸರಕನ್ನೂ ವಶಪಡಿಸಿಕೊಳ್ಳುತ್ತಿದ್ದರು. ಇದು ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ, ಲಾಕ್ಡೌನ್ 3.0 ವೇಳೆಗೆ ಮದ್ಯ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇಷ್ಟಾದರೂ ತೆಲಂಗಾಣದ ಪೊಲೀಸ್ ಪೇದೆಯೊಬ್ಬ ಪೊಲೀಸ್ ಜೀಪ್ನ ಚಾಲಕನ ಜತೆಗೂಡಿ ಠಾಣೆಯಲ್ಲಿ ದಾಸ್ತಾನು ಮಾಡಲಾಗಿದ್ದ ಮದ್ಯದ ಬಾಟಲಿಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್ಜಿ ಪಾಲಿಮರ್ಸ್ ಕಾರ್ಖಾನೆ ಇತಿಹಾಸ ಗೊತ್ತಾ?
ತೆಲಂಗಾಣದ ಕರೀಮನಗರ ಜಿಲ್ಲೆಯ ಟೂಟೌನ್ ಪೊಲೀಸ್ ಠಾಣೆಗೆ ಸೇರಿದ ಇವರಿಬ್ಬರೂ ಒಂದೆರಡು ಬಾಟಲ್ ಕದ್ದಿದ್ದರೆ ಅಧಿಕಾರಿಗಳು ಸುಮ್ಮನಾಗುತ್ತಿದ್ದರೋ ಏನೋ. ಆದರೆ ಬರೋಬ್ಬರಿ 69 ವಿಸ್ಕಿ ಬಾಟಲ್ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾರೆ.
ಲಾಕ್ಡೌನ್ 3.0 ಘೋಷಿಸಿದ ನಂತರದಲ್ಲಿ ದೇಶಾದ್ಯಂತ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧದ ವೇಳೆ ವಶಪಡಿಸಿಕೊಳ್ಳಲಾಗಿದ್ದ ಮದ್ಯದ ದಾಸ್ತಾನಿನ ಲೆಕ್ಕ ಪಡೆಯಲು ಠಾಣೆಯ ಹಿರಿಯ ಅಧಿಕಾರಿಗಳು ಮೇ 4ರಂದು ಮುಂದಾದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಲಾಕ್ಡೌನ್ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ
ಇದು ಒಳಗಿನವರದ್ದೇ ಕೃತ್ಯ ಎಂಬುದು ಸ್ಪಷ್ಟವಾದ ಬಳಿಕ, ಠಾಣೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಎಂಬ ಪೇದೆ ಹಾಗೂ ಪೊಲೀಸ್ ಜೀಪಿನ ಚಾಲಕ ರಾಣ ಎಂಬಿಬ್ಬರೂ ಮದ್ಯದ ಬಾಟಲಿಗಳನ್ನು ಕದಿಯುತ್ತಿದ್ದದ್ದು ಪತ್ತೆಯಾಗಿದೆ. ಚಾಲಕ ರಾಣಾನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಕುಡಿಯಲಿಲ್ಲ, ಮಾರಿದರು: ಅರುಣ್ ಮತ್ತು ರಾಣಾ ತಾವು ಕುಡಿಯಲು ಬಾಟಲಿಗಳನ್ನು ಕದ್ದಿರಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ರಾಣಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಮದ್ಯ ಮಾರಾಟ ನಿಷೇಧವಿದ್ದ ಸಂದರ್ಭದಲ್ಲಿ ಒಂದಕ್ಕೆ ಎರಡುಪಟ್ಟು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕದ್ದ ಮಾಲನ್ನು ತಮ್ಮ ಪರಿಚಿತರಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಇದೀಗ ಇವರಿಬ್ಬರನ್ನೂ ಬಂಧಿಸಿರುವ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.