ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸಾವಿರ ಗಡಿಯಲ್ಲಿ ಕರೊನಾ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಭಾನುವಾರವೂ ಕರೊನಾ ಸೋಂಕು ತಗುಲಿರುವ 934 ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,60,272ಕ್ಕೆ ಏರಿಕೆಯಾಗಿದೆ. 609 ಮಂದಿ ಗುಣಮುಖರಾಗುವ ಮೂಲಕ ಒಟ್ಟು 9,39,499 ಮಂದಿ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 8,364 ಸಕ್ರಿಯ ಪ್ರಕರಣಗಳಿದ್ದು, 125 ಮಂದಿ ಐಸಿಯುನಲ್ಲಿದ್ದಾರೆ. ಸೋಂಕಿಗೆ ಮೂವರು ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 12,390ಕ್ಕೆ ತಲುಪಿದೆ. ಭಾನುವಾರ ರಾಜ್ಯದ 200 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ನಡೆದಿದ್ದು,6 ಸಾವಿರ ಹಿರಿಯ ನಾಗರಿಕರು, 2 ಸಾವಿರ ನಾನಾ ರೋಗದಿಂದ ಬಳಲುವವರು ಸೇರಿ ಒತ್ತು 11,021 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಲಾಕ್ಡೌನ್ ಸಾಧ್ಯತೆ: ಬೆಂಗಳೂರಿನಲ್ಲಿ ಕರೊನಾ ಸೋಂಕು ಪ್ರಕರಣ ಕಳೆದ ಎರಡೂವರೆ ತಿಂಗಳಿಂದ 60ಕ್ಕೂ ಕಡಿಮೆ ಕಂಡುಬರುತ್ತಿತ್ತು. ಈ ಮೂಲಕ ಸೋಂಕು ದೂರವಾಗಿದೆ ಎಂಬ ನಿರಾಳತೆ ಮೂಡಿತ್ತು. ಆದರೆ, ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ 620ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗುವ ಮೂಲಕ ಮತ್ತೆ ಆತಂಕ ಎದುರಾಗಿದೆ. ಜತೆಗೆ, ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದ್ದು, ನಗರದಲ್ಲಿ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಕಂಡುಬಂದಲ್ಲಿ ಪುನಃ ಲಾಕ್ಡೌನ್ ಜಾರಿಯಾಗುವ ಸಾಧ್ಯತೆ ಇದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,11,439ಕ್ಕೆ ತಲುಪಿದೆ. ಮತ್ತೊಂದೆಡೆ 371 ಮಂದಿ ಸೋಂಕು ಮುಕ್ತರಾಗಿದ್ದು, ಈವರೆಗೆ 4,00,812 ಸೋಂಕಿತರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,107ಕ್ಕೆ ಏರಿಕೆಯಾಗಿದ್ದು, ಈ ಪೈಕಿ 48 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ಮೂವರು ಬಲಿಯಾಗುವ ಮೂಲಕ ಒಟ್ಟು ಮೃತರ ಸಂಖ್ಯೆ 4,519ಕ್ಕೆ ತಲುಪಿದೆ.
ಹಾಸನದಲ್ಲಿಂದು ಮಹಿಳಾ ದಿನಾಚರಣೆ; ಅಚ್ಚರಿ ಮೂಡಿಸಿದ ನಟ ದರ್ಶನ್ ಆಗಮನ!