ವಿಶಾಖಪಟ್ಟಣ: ಕರೊನಾ ಸಂಕಷ್ಟದ ನಡುವೆ ಕರ್ತವ್ಯದಲ್ಲಿರುವ ಎಲ್ಲರಿಗೂ ಸ್ಫೂರ್ತಿಯಾಗುವ ವಿದ್ಯಮಾನವಿದು. ಇಲ್ಲಿನ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಆಯುಕ್ತೆಯಾಗಿರುವ ಸೃಜನಾ ಗುಮ್ಮಲ್ಲ ಕರ್ತವ್ಯ ಬದ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸೃಜನಾ ಗುಮ್ಮಲ್ಲ 2013 ಬ್ಯಾಚ್ನ ಅಧಿಕಾರಿ. ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ದೇಶವೆಲ್ಲ ಕರೊನಾ ಸಂಕಷ್ಟದಲ್ಲಿದ್ದು, ಆಂಧ್ರದಲ್ಲೂ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂಥ ಸಮಯದಲ್ಲಿ ಪಾಲಿಕೆಯೊಂದರ ಆಯುಕ್ತೆಯಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳು ಹೆಚ್ಚಾಗಿರುತ್ತವೆ. ಜನರಿಗೆ ಅಗತ್ಯ ಸೇವೆಗಳನ್ನು ಕಲ್ಪಿಸುವುದು ಸ್ಥಳೀಯಾಡಳಿತ ಸಂಸ್ಥೆಯ ಹೊಣೆಗಾರಿಕೆ. ಈ ಜವಾಬ್ದಾರಿ ನಿರ್ವರ್ಹಿಸಲೆಂದೇ, ಆರು ತಿಂಗಳ ಬಾಣಂತನ ರಜೆಗೆ ಗುಡ್ಬೈ ಹೇಳಿದ್ದಾರೆ.
ಕಚೇರಿಯಲ್ಲಿ ತಿಂಗಳ ಮಗುವನ್ನು ಎತ್ತಿಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಜನರ ಮೆಚ್ಚುಗೆಗೆ, ಅಭಿನಂದನೆಗೆ ಆಭಾರಿಯಾಗಿರುವ ಸೃಜನಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಜತೆಗೆ, ಮಗುವಿನ ಆರೈಕೆಗೂ ಅಷ್ಟೇ ಗಮನ ನೀಡುತ್ತಿದ್ದೇನೆ. ನನ್ನೊಂದಿಗೆ ಇಟ್ಟುಕೊಂಡು ಮಗುವಿಗೆ ಎಲ್ಲ ಪೋಷಣೆಗಳನ್ನು ದೊರೆಯುವಂತೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ತಮ್ಮ ಕರ್ತವ್ಯ ಬದ್ಧತೆಯೊಂದಿಗೆ ಕರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲ ಕೋವಿಡ್ ವಾರಿಯರ್ಸ್ಗೆ ಸೃಜನಾ ಸ್ಫೂರ್ತಿಯಾಗಿರುವುದಂತೂ ಸತ್ಯ.