ಪಟಿಯಾಲಾ: ನಗರದ ತರಕಾರಿ ಮಾರುಕಟ್ಟೆ ಪ್ರವೇಶಿಸಲು ಪಾಸ್ ಕೇಳಿದ್ದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಕೈಯನ್ನೇ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದ ಏಳು ಜನರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬೆನ್ನತ್ತಿದ್ದರು. ಹಲ್ಲೆಕೋರರು ಪಟಿಯಾಲಾ ಹೊರವಲಯದ ಬಲ್ಬೆರಾ ಗ್ರಾಮದಲ್ಲಿದ್ದ ಸಿಖ್ಖರ ನಿಹಾಂಗ್ ಪಂಗಡಕ್ಕೆ ಸೇರಿದ ಗುರುದ್ವಾರ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಬಳಿಕ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನ್ದೀಪ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಗುರುದ್ವಾರ ಸುತ್ತುವರಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಏಳು ಜನರನ್ನು ಬಂಧಿಸಲಾಗಿದೆ. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಕಾರ್ಯಾಚರಣೆಯ ನೇತೃತ್ವವನ್ನು ಇನ್ಸ್ಪೆಕ್ಟರ್ ಜನರಲ್ ಜತಿಂದರ್ ಸಿಂಗ್ ಔಲಾಖ್ ವಹಿಸಿದ್ದರು ಎಂದು ಪಂಜಾಬ್ನ ವಿಶೇಷ ಕಾರ್ಯದರ್ಶಿ ಕರಣ್ ಬೀರ್ ಸಿಂಗ್ ಸಿಧು ಮಾಹಿತಿ ನಿಡಿದ್ದಾರೆ.
ಎಎಸ್ಐಗೆ ಪ್ಲಾಸ್ಟಿಕ್ ಸರ್ಜರಿ: ಹಲ್ಲೆಯಿಂದಾಗಿ ಎಡಗೈ ಕಳೆದುಕೊಂಡಿರುವ ಎಎಸ್ಐ ಹರ್ಜಿತ್ ಸಿಂಗ್ಗೆ ಚಂಡಿಗಢದ ಪಿಜಿಐ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನುರಿತ ಪ್ಲಾಸ್ಟಿಕ್ ಸರ್ಜನ್ಗಳು ಹರ್ಜಿತ್ ಸಿಂಗ್ಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಬೆಳಗ್ಗೆ 6 ಗಂಟೆ ವೇಳೆಗೆ ನಿಹಾಂಗ್ ಎಂದು ಕರೆಯಲಾಗುವ ಸಿಖ್ ಪಂಗಡದ ಕೆಲ ಸದಸ್ಯರು ತರಕಾರಿ ಖರೀದಿಸಲೆಂದು ಇಲ್ಲಿನ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದರು. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಪಂಜಾಬ್ನಲ್ಲಿ ಕಫ್ಯೂ ವಿಧಿಸಲಾಗಿದೆ. ಜನರು ಹೊರಬರಬೇಕೆಂದರೆ ಪೊಲೀಸರಿಂದ ಪಾಸ್ ಪಡೆಯಬೇಕು. ಅಂತೆಯೇ, ಮಾರುಕಟ್ಟೆ ಸಿಬ್ಬಂದಿ ಪಾಸ್ ತೋರಿಸುವಂತೆ ಕೇಳಿದ್ದಾನೆ. ಪಾಸ್ ಇಲ್ಲದ ಕಾರಣ ಅವರನ್ನು ಒಳಬಿಟ್ಟಿಲ್ಲ. ಅವನ ಮೇಲೆ ಹಲ್ಲೆ ನಡೆಸಿದ ಗುಂಪು ಮಾರ್ಕೆಟ್ ಪ್ರವೇಶಿಸಿದೆ. ಆಗ ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.