ನವದೆಹಲಿ: ನಿನ್ನೆಯಷ್ಟೇ ರಾಜ್ಯದ ಎಲ್ಲ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊವಿಡ್-19 ಸ್ಥಿತಿಗತಿಗಳನ್ನು ಚರ್ಚೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 10,500ರ ಗಡಿದಾಟಿದ ಬೆನ್ನಲ್ಲೇ ಮಾತನಾಡಿದ ಅವರು, ಒಂದು ವೈರಸ್ನಿಂದಾಗಿ ಇಡೀ ಜಗತ್ತು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಇದರಿಂದ ಬಚಾವಾಗಲು ಗಟ್ಟಿ ಸಂಕಲ್ಪ ಮಾಡಬೇಕು ಎಂದರು.
ನಾವು ಇಂಥ ಸಂಕಷ್ಟವನ್ನು ಮೊದಲು ಯಾವತ್ತೂ ಕೇಳಿರಲೂ ಇಲ್ಲ, ನೋಡಿರಲೂ ಇಲ್ಲ. ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಯಾರೂ ಊಹಿಸದಂತಹ ಕಷ್ಟ ಮಾನವ ಕುಲಕ್ಕೆ ಎದುರಾಗಿದೆ. ಆದರೆ ಈ ವೈರಸ್ ಎದುರು ಮಾನವರು ಎಂದೂ ಸೋಲನ್ನು ಒಪ್ಪಿಕೊಳ್ಳಬಾರದು. ನಾವು ನಮ್ಮನ್ನು ರಕ್ಷಿಸಿಕೊಳ್ಳುವದರೊಂದಿಗೆ ಮುನ್ನುಗ್ಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್ಡೌನ್ 4.0: ಪ್ರಧಾನಿ ಮೋದಿ
ಈ ಕರೊನಾ ಬಿಕ್ಕಟ್ಟು ಶುರುವಾದಾಗ ಒಂದೇಒಂದು ಪಿಪಿಇ ಕಿಟ್ ಭಾರತದಲ್ಲಿ ತಯಾರಾಗುತ್ತಿರಲಿಲ್ಲ. ಕೆಲವೇ ಕೆಲವು ಎನ್ 95 ಮಾಸ್ಕ್ಗಳು ಲಭ್ಯ ಇದ್ದವು. ಆದರೆ ಇಂದು ಪ್ರತಿದಿನ ಭಾರತದಲ್ಲಿ 2 ಲಕ್ಷ ಪಿಪಿಇ ಕಿಟ್ಗಳು ಸಿದ್ಧಗೊಳ್ಳುತ್ತವೆ. 2 ಲಕ್ಷ ಎನ್ 95 ಮಾಸ್ಕ್ಗಳು ರೆಡಿ ಆಗುತ್ತಿವೆ. ಭಾರತ ಈ ಕರೊನಾ ಬಿಕ್ಕಟ್ಟಿನ ಕಾಲವನ್ನೂ ಒಂದು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದೆ. ಆರ್ಥಿಕತೆಯಲ್ಲಿ ಹಿಂದೆ ಹೋಗಿರುವ ನಮ್ಮ ದೇಶವನ್ನು ಮತ್ತೆ 21ನೇ ಶತಮಾನಕ್ಕೆ ವಾಪಸ್ ತರಲು ಸ್ವಾವಲಂಬನೆಯೇ ಪ್ರಮುಖ ಮಾರ್ಗ. ಕರೊನಾ ಹೋರಾಟದಲ್ಲಿ ಭಾರತದ ಕ್ರಿಯೆ, ಕೆಲಸಗಳು ಇಡೀ ಜಗತ್ತಿನ ಎದುರು ಪ್ರತಿಫಲಿಸುತ್ತಿವೆ. ನಮ್ಮಲ್ಲಿನ ಕೌಶಲ ಬೆಳಕಿಗೆ ಬರುತ್ತಿದೆ ಎಂದು ಮೋದಿಯವರು ಹೇಳಿದರು.
ಇದನ್ನೂ ಓದಿ: ಕರೊನಾ ಸೋಂಕಿತ ನೆಲೆಸಿದ್ದ ಶಿಬರದಿನ್ನಿಯ ಎಡಭಾಗ ಕಂಪ್ಲೀಟ್ ಸೀಲ್ ಡೌನ್
ಕರೊನಾ ಸಂಕಷ್ಟ ಕಾಲ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನ (ಆತ್ಮ ನಿರ್ಭರ ಭಾರತ ಅಭಿಯಾನ) ಕ್ಕಾಗಿ ಇಂದು 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದು, ಇದು ಭಾರತ ಜಿಡಿಪಿ ದರದ ಪ್ರತಿಶತ 10ರಷ್ಟಾಗಿದೆ. ದೇಶದ ಬಡವರು, ಮಧ್ಯಮವರ್ಗದವರು, ಉದ್ಯಮ ಕ್ಷೇತ್ರ, ಕೃಷಿಕರು, ಶ್ರಮಿಕರು, ರೈತರು ಸೇರಿ ಎಲ್ಲರಿಗಾಗಿ ಈ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ: VIDEO: ಹೆದ್ದಾರೀಲಿ ಕುದುರೆ ಸವಾರಿ ಮಾಡಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಎಂಎಲ್ಎ ಪುತ್ರ…!