ಹೈದರಾಬಾದ್: ಹುಡುಗಿ ವಿಚಾರಕ್ಕೆ ಯುವಕನೊಬ್ಬ ತನ್ನ ಸ್ನೇಹಿತನ ತಲೆಯನ್ನು ಕತ್ತರಿಸಿ, ಹೃದಯವನ್ನು ಹೊರ ಕಿತ್ತು ಮತ್ತು ಖಾಸಗಿ ಅಂಗವನ್ನು ತುಂಡರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಕೊಲೆಯ ಬಳಿಕ ಮೃತದೇಹವನ್ನು ತೋರಿಸಲು ಘಟನಾ ಸ್ಥಳಕ್ಕೆ ಗರ್ಲ್ಫ್ರೆಂಡ್ ಕರೆದೊಯ್ದಿದ್ದ ಎಂಬ ಶಾಕಿಂಗ್ ಸಂಗತಿಯನ್ನು ಸೋಮವಾರ (ಮಾ.6) ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ್ದಾರೆ.
ರಾಚಕೊಂಡ ಕಮಿಷನರೇಟ್ ವ್ಯಾಪ್ತಿಯ ಅಬ್ದುಲ್ಲಾಪುರಮೆಟ್ ಪೊಲೀಸರು ಆರೋಪಿ ಪಿ. ಹರಿಕೃಷ್ಣನನ್ನು ವಿಚಾರಣೆಗೆ ಒಳಪಡಿಸಿದ ನಂತರ ಭೀಕರ ಹತ್ಯೆಯ ಇನ್ನಷ್ಟು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಪೊಲೀಸರು ಆರೋಪಿಯ ಗೆಳತಿಯನ್ನೂ ಪ್ರಕರಣದಲ್ಲಿ ಮೂರನೇ ಆರೋಪಿಯನ್ನಾಗಿ ಪೊಲೀಸರು ಸೇರಿಸಿ ಆಕೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ಹಸ್ಸನ್ ಎರಡನೇ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಹಿಂದೆ ಸರಿಯೋ ಮಾತೇ ಇಲ್ಲ… ಯಶ್ ಅಭಿಮಾನಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ವೆಂಕಟೇಶ್ ಹೇಳಿಕೆ
ಹರಿಕೃಷ್ಣ ತನ್ನ ಸ್ನೇಹಿತ ಎನ್. ನವೀನ್ (21)ನನ್ನು ಕೊಲೆ ಮಾಡಿದ್ದಾನೆ. ನವೀನ್ಇಂಜಿನಿಯರ್ ವಿದ್ಯಾರ್ಥಿಯಾಗಿದ್ದ. ಹೈದರಾಬಾದ್ನ ಹೊರವಲಯದ ಪೆದ್ದ ಅಂಬರ್ಪೇಟೆಯಲ್ಲಿ ಫೆ.17ರಂದು ಕೊಲೆ ಮಾಡಿದ್ದ. ಆದರೆ, ಈ ಘಟನೆ ಒಂದು ವಾರದ ಬಳಿಕ ಆರೋಪಿ ಪೊಲೀಸರ ಮುಂದೆ ಶರಣಾದಾಗ ಬೆಳಕಿಗೆ ಬಂದಿತು.
ನವೀನ್ನನ್ನು ಕೊಂದ ನಂತರ ಹರಿಕೃಷ್ಣ ಅವನ ತಲೆಯನ್ನು ಕತ್ತರಿಸಿ, ಅವನ ಹೃದಯ, ಬೆರಳುಗಳು ಮತ್ತು ಖಾಸಗಿ ಭಾಗಗಳನ್ನು ಕಿತ್ತುಹಾಕಿದ್ದ ಎಂದು ಎಲ್ಬಿ ನಗರದ ಉಪ ಪೊಲೀಸ್ ಆಯುಕ್ತ ಬಿ.ಸಾಯಿ ಶ್ರೀ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಅಂಗಾಂಗಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಬ್ರಾಹ್ಮಣಪಲ್ಲಿ ಗ್ರಾಮದ ಗೆಳೆಯ ಹಸ್ಸನ್ ಅವರ ಮನೆಗೆ ಕೊಂಡೊಯ್ದಿದ್ದ. ನಂತರ ಹಸ್ಸನ್ ಜೊತೆಗೆ ಅಂಗಾಂಗಗಳನ್ನು ಮಣ್ಣೇಗುಡ ಬಳಿ ಎಸೆದು ಹಸ್ಸನ್ ಮನೆಗೆ ಹಿಂತಿರುಗಿ, ಬಟ್ಟೆ ಬದಲಾಯಿಸಿ ರಾತ್ರಿ ಅಲ್ಲೇ ಕಳೆದಿದ್ದ ಎಂದು ಮಾಹಿತಿ ನೀಡಿದರು.
ಮರುದಿನ ಬೆಳಗ್ಗೆ ಹರಿಕೃಷ್ಣ ಬಿ.ಎನ್. ರೆಡ್ಡಿ ನಗರ ಕಾಲನಿಯಲ್ಲಿರುವ ಯುವತಿಯ ಮನೆಗೆ ತೆರಳಿ, ನವೀನ್ ಕೊಲೆಯ ಬಗ್ಗೆ ಆಕೆಗೆ ತಿಳಿಸಿ, ಅವಳಿಂದ 1,500 ರೂಪಾಯಿಯನ್ನು ತನ್ನ ಖರ್ಚಿಗೆ ತೆಗೆದುಕೊಂಡು ಹೊರಟು ಹೋದನು. ನಂತರ, ಅಂದಿನಿಂದ ಇಬ್ಬರು ಫೋನ್ನಲ್ಲಿ ಸಂಪರ್ಕದಲ್ಲಿದ್ದರು. ಫೆ. 20ರಂದು ಹರಿಕೃಷ್ಣ ಯುವತಿಯ ಮನೆಗೆ ಹೋಗಿ, ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಕರೆದುಕೊಂಡು ನವೀನ್ನನ್ನು ಕೊಂದ ಸ್ಥಳಕ್ಕೆ ಹೋಗಿದ್ದ. ಶವವನ್ನು ದೂರದಿಂದಲೇ ಆಕೆಗೆ ತೋರಿಸಿದ್ದ.
ನವೀನ್ ಕುಟುಂಬದ ಸದಸ್ಯರು ಫೆ. 21 ರಂದು ಹರಿಕೃಷ್ಣ ಅವರಿಗೆ ಕರೆ ಮಾಡಿ ನವೀನ್ ಎಲ್ಲಿದ್ದಾನೆ ಎಂದು ಕೇಳಿದಾಗ ಹರಿಕೃಷ್ಣ ಗಾಬರಿಗೊಂಡಿದ್ದ. ತನ್ನ ಅಪರಾಧ ಬಯಲಾಗಬಹುದು ಎಂಬ ಭಯದಿಂದ ಆತ ಖಮ್ಮಮ್ಗೆ ಹೊರಟನು. ನಂತರ ವಿಜಯವಾಡ ಮತ್ತು ವಿಶಾಖಪಟ್ಟಣಕ್ಕೆ ಹೋಗಿ ಫೆ. 23 ರಂದು ತನ್ನ ತಂದೆಯನ್ನು ಭೇಟಿ ಮಾಡಲು ವಾರಂಗಲ್ಗೆ ಹೋಗಿದ್ದ. ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ ಎಂದು ತಂದೆ ತಿಳಿಸಿದರು ಮತ್ತು ಶರಣಾಗುವಂತೆ ಸೂಚಿಸಿದರು.
ಫೆ. 24 ರಂದು ಹರಿಕೃಷ್ಣ ಹೈದರಾಬಾದ್ಗೆ ಬಂದು ಹಸ್ಸನ್ ಮನೆಗೆ ಹೋದನು. ಬಳಿಕ ಇಬ್ಬರು ಮನ್ನೆಗುಡ್ಡದಲ್ಲಿ ನವೀನ್ನ ದೇಹದ ಭಾಗಗಳನ್ನು ಎಸೆದಿದ್ದ ಸ್ಥಳಕ್ಕೆ ಹೋಗಿದ್ದಾರೆ. ದೇಹದ ಭಾಗಗಳನ್ನು ತಂದು ಬೆಂಕಿ ಹಚ್ಚಿದ್ದರು. ನಂತರ ಹರಿಕೃಷ್ಣ ತನ್ನ ಗೆಳತಿಯ ಮನೆಗೆ ಹೋಗಿ ಸ್ನಾನ ಮಾಡಿದ್ದಾನೆ. ಅಲ್ಲಿಂದ ನೇರವಾಗಿ ಅಬ್ದುಲ್ಲಾಪುರಮೆಟ್ ಠಾಣೆಗೆ ತೆರಳಿ ಶರಣಾದನು. (ಏಜೆನ್ಸೀಸ್)
VIDEO|ಹನುಮಂತನ ಚಿತ್ರದ ಎದುರೇ ಬಿಕಿನಿ ತೊಟ್ಟು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ!
2ನೇ ಬಾರಿಗೆ ಟ್ವಿಟ್ಟರ್ ಅಕ್ಷರಗಳ ಮಿತಿ ಹೆಚ್ಚಳ; ಶೀಘ್ರದಲ್ಲೇ ಹತ್ತು ಸಾವಿರಕ್ಕೆ ಏರಿಕೆ