ಹೈದರಾಬಾದ್: ಇಷ್ಟವಿಲ್ಲದಿದ್ದರೂ ರಹಸ್ಯವಾಗಿಯೇ ಅನ್ಯ ಜಾತಿ ಯುವಕನನ್ನು ಮದುವೆಯಾದ ಮಗಳು. ಕೋಪಗೊಂಡ ಕುಟುಂಬ ತಮ್ಮ ಮರ್ಯಾದೆಗಾಗಿ ಮಗಳು ಮತ್ತು ಆಕೆಯ ಗಂಡನ ಕೊಲೆಗೆ ಸಂಚು ರೂಪಿಸಿ ಕೊನೆಗೆ ಪತಿಯನ್ನು ಬಲಿ ಪಡೆದುಕೊಂಡು ಮಗಳ ಬಾಳು ಹಾಳು ಮಾಡಿದ ಹೈದರಾಬಾಗಿನ ಮರ್ಯಾದೆ ಹತ್ಯೆಯ ರೋಚಕ ಸಂಗತಿ ಇಲ್ಲಿದೆ.
ಹೇಮಂತ್ ಕುಮಾರ್ (28) ಮೃತ ದುರ್ದೈವಿ. ಇಂಟಿರಿಯರ್ ಡಿಸೈನರ್ ಆಗಿದ್ದ ಹೇಮಂತ್ ಶವ ಶುಕ್ರವಾರ ಬೆಳಗ್ಗೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ 13 ಮಂದಿಯನ್ನು ಸೈಬರಬಾದ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೇಮಂತ್, 25 ವರ್ಷದ ಇಂಜಿನಿಯರ್ ಪದವೀಧರೆ ಆವಂತಿ ರೆಡ್ಡಿ ಎಂಬಾಕೆಯನ್ನು ಕಳೆದ ಜೂನ್ ತಿಂಗಳಲ್ಲಿ ವಿವಾಹವಾಗಿದ್ದರು. ಇವರಿಬ್ಬರು ನಾಲ್ಕು ವರ್ಷದಿಂದ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಇದು ಆವಂತಿ ಮನೆಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಇಬ್ಬರು ರಹಸ್ಯವಾಗಿ ಕಳೆದ ಜೂನ್ನಲ್ಲಿ ಮದುವೆಯಾಗಿದ್ದರು. ಅದಾದ ಬಳಿಕ ಆವಂತಿ ಮತ್ತು ಆಕೆಯ ಗಂಡನೊಂದಿಗೆ ಕುಟುಂಬ ಸಂಪರ್ಕವನ್ನು ಕಡಿದುಕೊಂಡಿತ್ತು. ಆದರೂ ಒಳಗೊಳಗೆ ದ್ವೇಷದ ಕಿಚ್ಚು ಕುದಿಯುತ್ತಿತ್ತು.
ನಾಲ್ಕು ದಿನಗಳ ಹಿಂದಷ್ಟೆ ಅಂಕಲ್ ವಿಜಯೇಂದರ್, ಫೋನ್ ಮೂಲಕ ಆವಂತಿ ಸಂಪರ್ಕ ಸಾಧಿಸಿದ್ದ. ಹೇಮಂತ್ ಹಾಗೂ ವೈವಾಹಿಕ ಜೀವನ ಕುರಿತು ವಿಚಾರಿಸಿ, ಒಟ್ಟಿಗೆ ನಮ್ಮ ಜತೆ ಸೇರಿಕೊಂಡರೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿಕೊಂಡಿದ್ದ. ಅಂದಿನಿಂದಲೂ ವಿಜಯೇಂದರ್, ಆವಂತಿ ಜತೆ ಮಸೇಜ್ ಮೂಲಕ ಆಗು-ಹೋಗುಗಳನ್ನು ವಿಚಾರಿಸುತ್ತಿದ್ದ. ಹೀಗಿರುವಾಗ ಗುರುವಾರ ಆವಂತಿ ಸೋದರಸಂಬಂಧಿಗಳು ಕರೆ ಮಾಡಿ ನಿನ್ನನ್ನು ಭೇಟಿಯಾಗಿ ಕೆಲ ಸಮಯ ಕಳೆಯಬಹುದೇ ಎಂದು ಕೇಳಿಕೊಂಡಿದ್ದರು. ನಮ್ಮ ಮನೆಯವರೆಲ್ಲ ಮತ್ತೆ ನಮ್ಮೊಡನೆ ಸೇರುತ್ತಿದ್ದಾರಲ್ಲ ಎಂಬ ಖುಷಿ ಆವಂತಿ ಮನದಲ್ಲೂ ಇತ್ತು.
ಇದನ್ನೂ ಓದಿ: ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ
ಗುರುವಾರ ಸಂಜೆ ಅಂಕಲ್ ವಿಜಯೇಂದರ್, ಯುಗಾಂಧರ್ ರೆಡ್ಡಿ, ಸೋದರಸಂಬಂಧಿಗಳಾದ ರಾಕೇಶ್ ರೆಡ್ಡಿ, ಸಂತೋಷ್ ರೆಡ್ಡಿ, ರಂಜಿತ್ ರೆಡ್ಡಿ ಮತ್ತು ಸಂದೀಪ್ ರೆಡ್ಡಿ ಹಾಗೂ ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಮೂರು ಕಾರುಗಳಲ್ಲಿ ಆವಂತಿ ಮನೆಗೆ ಭೇಟಿ ನೀಡಿದ್ದರು. ಬಂದವರು ಉಭಯ ಕುಶಲೋಪರಿ ವಿಚಾರಿಸದೆ ಬಲವಂತವಾಗಿ ಆವಂತಿಯನ್ನು ಎಳೆದುಕೊಂಡು ಕಾರಿನಲ್ಲಿ ಹಾಕಿಕೊಂಡು ಮನೆಗೆ ಕರೆದೊಯ್ದರು. ನನ್ನ ಮನೆಯವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಮತ್ತು ನನ್ನ ಪತಿಯನ್ನು ಕೊಲ್ಲುತ್ತಾರೆಂದು ನಾನು ಯೋಚಿಸಿಯೇ ಇರಲಿಲ್ಲ ಎಂದು ಆವಂತಿ ಹೇಳಿಕೊಂಡಿದ್ದಾಳೆ.
ಅಚ್ಚರಿಯೆಂದರೆ ಮಗಳು ಹತ್ತಿರದಲ್ಲೇ ವಾಸವಿದ್ದರೂ ಆವಂತಿ ಮನೆಯವರಿಗೆ ವಿಳಾಸ ಕುರಿತು ಒಂದು ಸುಳಿವು ಸಹ ಸಿಕ್ಕಿರಲಿಲ್ಲ. ಆದಾಗ್ಯು ಆವಂತಿ ಕುಟುಂಬ ಹೇಮಂತ್ ಕುಟುಂಬದ ಮೇಲೆ ಕಣ್ಣಿಟ್ಟಿತ್ತು. ಅಲ್ಲಿಗೆ ಒಮ್ಮೆ ದಂಪತಿ ಭೇಟಿ ಮಾಡಿದ್ದನ್ನು ನೋಡಿ ಅವರನ್ನು ಹಿಂಬಾಲಿಸಿ ಮನೆಯ ವಿಳಾಸ ಪತ್ತೆಹಚ್ಚಿದ್ದರು. ಬಳಿಕ ಕೊಲೆಗೆ ಸಂಚು ರೂಪಿಸಲು ಆರಂಭಿಸಿದರು. ಅದರ ಮೊದಲ ಹೆಜ್ಜೆಯಾಗಿ ಆವಂತಿ ಸಂಪರ್ಕ ಸಾಧಿಸಿದರು. ಅದರಂತೆ ಆವಂತಿ ಮತ್ತು ಹೇಮಂತ್ ಮನೆಯಲ್ಲಿರುವಾಗ ಬಂದು ಅವರನ್ನು ಅಪಹರಣ ಮಾಡಿಕೊಂಡು ಹೋಗುವಾಗಿ ಆವಂತಿ ಕಾರಿನಿಂದ ಜಿಗಿದು ಬಚಾವ್ ಆಗಿದ್ದಳು. ಆದರೆ, ಹೇಮಂತ್ ಕೈಯಲ್ಲಿ ಸಾಧ್ಯವಾಗಲಿಲ್ಲ. ಬಳಿಕ ಸಂಗಾರೆಡ್ಡಿ ಜಿಲ್ಲೆಯ ಕಿಸ್ತಾಗುಡೆಮ್ ಗ್ರಾಮದ ನಿರ್ಜನ ಪ್ರದೇಶವೊಂದರ ಬಳಿ ಉಸಿರುಗಟ್ಟಿಸಿ ಕೊಲೆಗೈದು ಹೇಮಂತ್ ಶವವನ್ನು ಎಸೆದು ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆಯಷ್ಟೇ ಶವ ಪತ್ತೆಯಾಗಿದೆ.
ಇತ್ತ ಆವಂತಿ ಪೊಲೀಸರಿಗೆ ನೀಡಿದ ದೂರಿನ ಆಧಾರ ಮೇಲೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕುಟುಂಬವೂ ಸೇರಿದಂತೆ 13 ಮಂದಿ ಭಾಗಿಯಾಗಿದ್ದರು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಕೆಲ್ಸ ಬಿಡಿಸಿ, ಮೊಬೈಲ್ ಕಸಿದು ಮನೆಯಲ್ಲೇ ಬಂಧಿಸಿದರು, ಇದೀಗ ಪತಿಯನ್ನು ಕೊಂದರು: ನವವಿವಾಹಿತೆಯ ಕಣ್ಣೀರು
4 ವರ್ಷ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದು ಮದ್ವೆಯಾದ ಕೆಲವೇ ತಿಂಗಳಲ್ಲಿ ಬರ್ಬರ ಹತ್ಯೆಯಾದ ನವವಿವಾಹಿತ!