ಹೈದರಾಬಾದ್: ಇಂದು ಬೆಳ್ಳಂಬೆಳಗ್ಗೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನವವಿವಾಹಿತ ಹೇಮಂತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಪತ್ನಿ ಆವಂತಿ ರೆಡ್ಡಿ ಮನೆಯವರಿಂದಲೇ ಬರ್ಬರ ಹತ್ಯೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಪತಿಯನ್ನು ಕೊಂದ ತಮ್ಮ ಕುಟುಂಬದವರ ಕರಾಳ ಮುಖವನ್ನು ಆವಂತಿ ಕಣ್ಣೀರಿಡುತ್ತಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೃತ ಹೇಮಂತ್ ತಮಾಷೆಯ ಹುಡುಗ. ತಮ್ಮ ಕುಟುಂಬದ ಪ್ರೀತಿ ಪಾತ್ರನಾಗಿದ್ದ. ತಂದೆ ಲಕ್ಷ್ಮೀ ರಾಣಿ ಮತ್ತು ತಂದೆ ಮುರಳಿ ಕೃಷ್ಣನ ಮುದ್ದಿನ ಮಗನಾಗಿದ್ದ. ಆತನ ಸಹೋದರ ಇಂಗ್ಲೆಂಡ್ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ತಾನೂ ಇಂಟಿರಿಯರ್ ಡಿಸೈನರ್ ಆಗಿದ್ದ. ಇಂಜಿನಿಯರ್ ಪದವೀಧರೆ ಆವಂತಿಯನ್ನು ಹೇಮಂತ್ ಪ್ರೀತಿಸಿದ್ದ. ಇಬ್ಬರು ನಾಲ್ಕು ವರ್ಷದಿಂದ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ಕಳೆದ ಜೂನ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದಲ್ಲದೆ, ಆರ್ಥಿಕವಾಗಿಯೂ ಎರಡು ಕುಟುಂಬದ ನಡುವೆ ಬಹುದೊಡ್ಡ ಅಂತರವಿತ್ತು. ಹೀಗಾಗಿ ಮದುವೆ ಒಪ್ಪದ ಆವಂತಿ ಮನೆಯವರು ಅದೇ ದ್ವೇಷದಲ್ಲಿ ಹೇಮಂತ್ನನ್ನು ಕೊಲೆಗೈದಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಾಯ್ತು ಕಣ್ ಕಣ್ಣ ಸಲಿಗೆ.. ಆತನಿಗೆ 38, ಆಕೆಗೆ 40.. ಈಗ ಇಬ್ಬರೂ ಎಂಗೇಜ್ಡ್!
ಈ ಬಗ್ಗೆ ನೊಂದ ಮನಸ್ಸಿನಿಂದಲೇ ಮಾತನಾಡಿರುವ ಆವಂತಿ, ನನ್ನ ಮನೆಯವರು ನನ್ನನ್ನು ಬಲವಂತವಾಗಿ ಕೆಲಸ ಬಿಡುವಂತೆ ಮಾಡಿ ಮನೆಯಲ್ಲೇ ಉಳಿಯುವಂತೆ ಮಾಡಿದರು. ಮೊಬೈಲ್ ಬಳಸದೇ ಅನೇಕ ತಿಂಗಳವರೆಗೆ ನನಗೆ ಹಿಂಸೆ ನೀಡಲಾಯಿತು. ನನ್ನ ಸುತ್ತ ಕೃತಕ ಜೈಲು ಸೃಷ್ಟಿ ಮಾಡಿದರು. ನನ್ನಿಂದ ಎಲ್ಲವನ್ನು ಕಿತ್ತುಕೊಂಡ ಮನೆಯವರು ಇದೀಗ ನನ್ನ ಪತಿಯನ್ನು ಕೊಂದಿದ್ದಾರೆಂದು ದುಃಖದಿಂದಲೇ ಆವಂತಿ ಹೇಳಿಕೊಂಡಿದ್ದಾಳೆ.
ಹೇಮಂತ್ ತಂದೆ ಮುರುಳಿ ಕೃಷ್ಣ ಮಾತನಾಡಿ, ಆವಂತಿ ಕುಟುಂಬದವರು ಮೇಲ್ವರ್ಗಕ್ಕೆ ಸೇರಿದವರು. ಅಲ್ಲದೆ, ಆರ್ಥಿಕವಾಗಿಯೂ ಸದೃಢರು. ಹೀಗಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು ಹೇಮಂತ್ ವೈಶ್ಯ ಸಮುದಾಯಕ್ಕೆ ಸೇರಿದವನಾಗಿದ್ದ. ಆವಂತಿ ರೆಡ್ಡಿ ಸಮುದಾಯದವಳು. ಆವಂತಿ ತಂದೆ ಲಕ್ಷ್ಮ ರೆಡ್ಡಿ ಓರ್ವ ಉದ್ಯಮಿ. ಮಗಳನ್ನು ಸಾಮಾನ್ಯ ಕಾರ್ಮಿಕನಿಗೆ ಕೊಟ್ಟರೂ ಪರವಾಗಿಲ್ಲ. ಆದರೆ, ಎಷ್ಟೇ ಶ್ರೀಮಂತನಾಗಿದ್ದರೂ ಸರಿ ಬೇರೆ ಜಾತಿಯ ಹುಡುಗನಿಗೆ ಕೊಡುವುದಿಲ್ಲ ಎಂದು ಹೇಳುತ್ತಿದ್ದರಂತೆ. ಆದರೆ, ಮಗಳು ಅವರ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಹೇಮಂತ್ನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. (ಏಜೆನ್ಸೀಸ್)
4 ವರ್ಷ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದು ಮದ್ವೆಯಾದ ಕೆಲವೇ ತಿಂಗಳಲ್ಲಿ ಬರ್ಬರ ಹತ್ಯೆಯಾದ ನವವಿವಾಹಿತ!