ಬೆಂಗಳೂರು: ಅರ್ಧ ಕರ್ನಾಟಕಕ್ಕೆ ಬಿಸಿ ಗಾಳಿ ತಾಪ ತಟ್ಟಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬೀದರ್,ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಬಿಸಿಗಾಳಿ ಮುಂದುವರಿಯಲಿದೆ.ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2&3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ. ಶನಿವಾರ ಕಲಬುರಗಿ ಮತ್ತು ಯಾದಗಿರಿಯಲ್ಲಿ ತಲಾ 43.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿ ವಾತಾವರಣ ಕಂಡುಬರುತ್ತಿದೆ.ಬಿಸಿ ಗಾಳಿ ವಾತಾವರಣ ಇರುವ ಸಂದರ್ಭದಲ್ಲಿ ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿಲಿನಲ್ಲಿ ಓಡಾಡಬಾರದು, ಸಾಕಷ್ಟು ನೀರು ಕುಡಿಯಬೇಕು, ಹತ್ತಿ ಬಟ್ಟೆ ಧರಿಸಬೇಕು, ಬಿಸಿಲಿನಲ್ಲಿ ಓಡಾಡುವಾಗ ಛತ್ರಿ, ಕನ್ನಡಕ, ಟೋಪಿ, ಶೂ,ಚಪ್ಪಲಿ ಧರಿಸಬೇಕು,ಮದ್ಯಪಾನ ತ್ಯಜಿಸಿ ದ್ರವರೂಪದ ಪಾನೀಯ ಸೇವಿಸಬೇಕು. ಅಧಿಕ ಪೋಷಕಾಂಶ ಆಹಾರ ತಿನ್ನಬಾರದು. ವಾಹನ ನಿಲುಗಡೆ ಸ್ಥಳಗಳಲ್ಲಿ ಮಕ್ಕಳು, ಸಾಕು ಪ್ರಾಣಿಗಳನ್ನು ಬಿಡಬಾರದು ಎಂದು ಇಲಾಖೆ ಸಲಹೆ ಕೊಟ್ಟಿದೆ.
ಜನ ಹೈರಾಣು: ರಾಜ್ಯದಲ್ಲಿ ಹೆಚ್ಚಳವಾಗಿರುವ ಬಿಸಿಲು ಧಗೆಗೆ ಜನರು ಹೈರಾಣುರಾಗಿದ್ದು, ಮಳೆ ಜಪಿಸುತ್ತಿದ್ದಾರೆ. ಹಗಲು&ರಾತ್ರಿ ವೇಳೆ ತಾಪಮಾನ ಬಿಸಿ ಇರುವುದರಿಂದ ದೇಹದಲ್ಲಿ ಬೆವರುವಿಕೆ ಜಾಸ್ತಿಯಾಗುತ್ತಿದೆ. ರಾತ್ರಿ ವೇಳೆ ಸೆಖೆಯಿಂದಾಗಿ ನಿದ್ರೆಗೆ ಭಂಗ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿಯದಿದ್ದರೆ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಲಿದ್ದಾರೆ. ಮಳೆ ಕೊರತೆಯಿಂದ ನಲುಗಿದ್ದ ರೈತರು, ಬಿಸಿಲಿನಿಂದ ಜನವಾರುಗಳನ್ನು ರಸಿಕೊಳ್ಳಲು ಪರದಾಡುತ್ತಿದ್ದಾರೆ.
ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು
30 ವರ್ಷ ಬಳಿಕ ದಾಖಲೆ ಉಷ್ಣಾಂಶ: ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 38.3 ಡಿ.ಸೆ.ಉಷ್ಣಾಂಶ ವರದಿಯಾಗಿದೆ. 30 ವರ್ಷ ಬಳಿಕ ದಾಖಲೆ ಉಷ್ಣಾಂಶ ಕಂಡುಬಂದಿದೆ. 1996ರ ಮಾ.29ರಂದು 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಗರದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚು ಉಷ್ಣಾಂಶ ಇದಾಗಿತ್ತು.ಮಾರ್ಚ್ ಮತ್ತು ಪ್ರಸ್ತುತ ತಿಂಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾಣದಲ್ಲಿ ವಾಡಿಕೆಗಿಂತ 2&3 ಡಿ.ಸೆ.ಹೆಚ್ಚು ತಾಪಮಾನ ದಾಖಲಾಗುತ್ತಿದೆ.
155214 ಸಹಾಯವಾಣಿಗೆ ಕರೆ ಮಾಡಿ: ರಾಜ್ಯದಲ್ಲಿ ತಾಪಮಾನ ಅಧಿಕವಾಗುತ್ತಿದ್ದು, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುವಂತೆ ಕಾರ್ಮಿಕ ಇಲಾಖೆ ಸಲಹೆ ಕೊಟ್ಟಿದೆ. ಯೆಥೇಚ್ಛವಾಗಿ ನೀರು ಕುಡಿಯಬೇಕು, ಕೆಲಸದ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ನೆರಳಿನ ವ್ಯವಸ್ಥೆ ಮಾಡಿಕೊಳ್ಳಬೇಕು, ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು, ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಬೇಕು ಎಂದು ಇಲಾಖೆ ಹಲವು ಸಲಹೆಗಳನ್ನು ನೀಡಿದೆ. ಏನಾದರೂ ಅನಾಹುತವಾದರೆ 155214 ಸಹಾಯವಾಣಿಗೆ ಕರೆ ಮಾಡಬಹುದು.
ತಾಪಮಾನ ದಾಖಲು ವಿವರ:
ಜಿಲ್ಲೆ ವಾಡಿಕೆ ಪ್ರಸ್ತುತ ದಾಖಲು ವಾಡಿಕೆಗಿಂತ ಹೆಚ್ಚಳ(ಉಷ್ಣಾಂಶ)
ಬೀದರ್ 37.6 39.4 1.8
ಕಲಬುರಗಿ 39.7 43.3 3.6
ವಿಜಯಪುರ 38.2 41 2.8
ಬಾಗಲಕೋಟೆ 36.5 42.1 5.6
ರಾಯಚೂರು 39.4 41.4 2
ಕೊಪ್ಪಳ 38.4 41.1 2.8
ಬಳ್ಳಾರಿ 38.4 41.1 2.8
ಬೆಳಗಾವಿ 36.2 38.2 2.2
ಗದಗ 37.6 40.6 3.6
ಹಾವೇರಿ 36.4 39.8 3.4
ಧಾರವಾಡ 36.4 39.8 3.4
ದಾವಣಗೆರೆ 36.7 39 2. 3
ಚಿತ್ರದುರ್ಗ 36.4 38.6 2.2
ತುಮಕೂರು 34.9 40.9 6
ಮಂಡ್ಯ 35.6 38.6 3
ಮೈಸೂರು 34.4 37.5 3.1
ಬೆಂಗಳೂರು 34 37 3
ಬೆಂ.ಗ್ರಾಮಾಂತರ 34.7 38.3 3.6
ಚಿಕ್ಕಬಳ್ಳಾಪುರ 34.7 38.3 3.6