ಹಿರಿಯೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದು, ಆ ರಾಜ್ಯದ ಹಾಟ್ಸ್ಪಾಟ್ ಜಿಲ್ಲೆ-ತಾಲೂಕುಗಳ ಜನರು ಪೊಲೀಸರ ಕಣ್ಣು ತಪ್ಪಿಸಿ ಕರ್ನಾಟಕವನ್ನು ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಗಡಿ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ.
ಆಂಧ್ರ ಸರ್ಕಾರ ಗಡಿ ಗ್ರಾಮಗಳಲ್ಲಿ ಜನರ ಓಡಾಟಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗುಟ್ಕಾ, ದಿನಸಿ ಖರೀದಿ ಇತರೆ ಕಾರಣಕ್ಕೆ ಅಲ್ಲಿನವರು ಸುಲಭವಾಗಿ ಕರ್ನಾಟಕದ ಗಡಿ ಪ್ರವೇಶಿಸಬಹುದಾಗಿದೆ.
ಹಿರಿಯೂರು ತಾಲೂಕಿನ ಪಿ.ಡಿ. ಕೋಟೆ ಬಳಿ ಇಂಟರ್ಸ್ಟೇಟ್ ಚೆಕ್ಪೋಸ್ಟ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಖಂಡೇನಹಳ್ಳಿ ಪಾಳ್ಯ, ಮದ್ದಿಹಳ್ಳಿ ಇತರೆಡೆ ಆಂಧ್ರ ಸಂಪರ್ಕ ರಸ್ತೆ ಬಂದ್ ಮಾಡಿದ್ದರೂ ಜಮೀನು ರಸ್ತೆ, ಬಂಡಿದಾರಿ ಮೂಲಕ ಗಡಿ ಗ್ರಾಮಕ್ಕೆ ಜನರು ಬರುತ್ತಿದ್ದಾರೆ.
ಮಗ-ಸೊಸೆಗೂ ನಿರ್ಬಂಧ: ಖಂಡೇನಹಳ್ಳಿ ಗ್ರಾಮಕ್ಕೆ ಬುಧವಾರ ಸಂಜೆ ದೊಡ್ಡಬಳ್ಳಾಪುರ ಜಿಲ್ಲೆಯಿಂದ ಆಗಮಿಸಿದ ಮಗ-ಸೊಸೆಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ಹೆತ್ತವರು ನಿರಾಕರಿಸಿದ್ದಾರೆ. ಹೀಗಾಗಿ ದಂಪತಿ ಗ್ರಾಮದ ದೇಗುಲದ ಬಳಿ ರಾತ್ರಿ ಉಳಿದುಕೊಂಡಿದ್ದಾರೆ. ಆರೋಗ್ಯ ಇಲಾಖೆ-ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮದ ಹಾಸ್ಟೆಲ್ನಲ್ಲಿ ಇಬ್ಬರನ್ನೂ ಹೋಂ ಕ್ವಾರಂಟೈನಲ್ಲಿ ಇರಿಸಿದ್ದಾರೆ.
ರಾಜ್ಯದ ವಿವಿಧೆಡೆ ಉದ್ಯೋಗಕ್ಕೆ ತೆರಳಿದ್ದವರು ಒಂದು ವಾರದಿಂದ ಹಳ್ಳಿಗಳಿಗೆ ವಾಪಸಾಗುತ್ತಿದ್ದು, ಇವರನ್ನು ಗುರುತಿಸಿ ಹೋಂ ಕ್ವಾರಂಟೈನಲ್ಲಿರಿಸಲು ಕ್ರಮ ಕೈಗೊಳ್ಳಬೇಕಾಗಿದೆ.