ಶಿವಮೊಗ್ಗ: ಲೋಕಸಭೆ ಚುನಾವಣೆ ಬಳಿಕ ಮತ್ತೆ ಹಿಂದುಳಿದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ಹಾಗೂ ಅವರಿಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಹಿಂದ ಸಂಘಟನೆಯನ್ನು ಹುಟ್ಟುಹಾಕಲು ಚಿಂತನೆ ನಡೆಸಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಹಿಂದ ಸಂಘಟನೆ ಯಾವ ಸ್ವರೂಪದಲ್ಲಿರಬೇಕು? ಎಂಬ ಬಗ್ಗೆ ಚುನಾವಣೆ ಬಳಿಕ ರಾಜ್ಯ ಪ್ರವಾಸ ನಡೆಸಿ ಹಿಂದುಳಿದ ಸಮುದಾಯಗಳ ನಾಯಕರು, ವಿವಿಧ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ ಬೆಳೆಸಿದ್ದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ನಾಯಕ ಅಮಿತ್ ಷಾ ಅವರಿಗೆ ತಪ್ಪು ಮಾಹಿತಿ ನೀಡಿ ಬ್ರಿಗೇಡ್ ವಿಸರ್ಜನೆ ಮಾಡಿಸುವಲ್ಲಿ ಯಶಸ್ವಿಯಾದರು. ಅಂದು ನಾನು ಬ್ರಿಗೇಡ್ ವಿಸರ್ಜನೆಗೆ ಒಪ್ಪಿಕೊಳ್ಳಬಾರದಿತ್ತೆಂದು ಈಗ ಅನಿಸುತ್ತಿದೆ. ಮತ್ತೆ ಅಂಥದ್ದೇ ಒಂದು ಸಂಘಟನೆಯನ್ನು ಕಟ್ಟುವ ತೀರ್ಮಾನ ಮಾಡಿದ್ದೇನೆ ಎಂದರು.
ನಾನು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಟ್ಟಿಗೆ ಕೂರಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇನೆ. ಕಾನೂನು ಇರುವುದೇ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲು. ಇದನ್ನು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು ಎಂದು ಹೇಳಿದರು.