ಲಖನೌ: ಕ್ಯಾನ್ಸರ್ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಉತ್ತರ ಪ್ರದೇಶ ಹೈಕೋರ್ಟ್ ಆದೇಶಿಸಿದೆ. ನಿರುದ್ಯೋಗಿ ಯುವಕನೊಬ್ಬ ತನ್ನ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣದ ಕೊರತೆ ಅಡ್ಡವಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಕೋರ್ಟ್ ಈ ಆದೇಶ ಮಾಡಿದೆ.
ಲಖನೌನ ಸೌಹಾರ್ದ್ ಲಖನಪಾಲ್ ಎಂಬ ಯುವಕ ತನ್ನ ತಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೂ ಹಣಕಾಸಿನ ತೊಂದರೆಯಿಂದ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ರಿಟ್ ಅರ್ಜಿ ಸಲ್ಲಿಸಿದ್ದರು. 2020ರ ಏಪ್ರಿಲ್ ತಿಂಗಳಲ್ಲಿ ತಾಯಿಗೆ ಕ್ಯಾನ್ಸರ್ ಪತ್ತೆಯಾದಾಗ ಲಖನ್ಪಾಲ್ ಖುದ್ದಾಗಿ ನ್ಯಾಯಾಲಯದ ಮುಂದೆ ನಿಂತಿದ್ದರು. ನಂತರ ನ್ಯಾಯಾಲಯವೇ ಆತನ ಪರವಾಗಿ ವಕೀಲ ಮುರಳಿ ಮನೋಹರ ಶ್ರೀವಾತ್ಸವ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿತ್ತು.
ಇದನ್ನೂ ಓದಿ: ಅಪ್ಪ ಹಾಕಿದ ಲವ್ ಜಿಹಾದ್ ಕೇಸ್- ಪುತ್ರಿ ಎಂದಳು ನಮ್ದು ಪ್ಯೂರ್ ಲವ್: ಹೈಕೋರ್ಟ್ ಏನು ಹೇಳ್ತು ನೋಡಿ…
ತನ್ನ ತಂದೆ ಫ್ರೀಲಾನ್ಸ್ ಪತ್ರಕರ್ತರಾಗಿದ್ದು, ಕ್ಯಾನ್ಸರ್ನಿಂದ ಬಳಲುತ್ತಿರುವ ತಾಯಿ ಗೃಹಿಣಿಯಾಗಿದ್ದಾರೆ. ಸ್ವತಃ ತಾನು ನಿರುದ್ಯೋಗಿಯಾಗಿರುವುದರಿಂದ ಕುಟುಂಬದ ವಾರ್ಷಿಕ ಆದಾಯ ತುಂಬಾ ಕಡಿಮೆ ಇದೆ. ಈ ಸ್ಥಿತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಯ ದೊಡ್ಡ ಜವಾಬ್ದಾರಿಯು ತನ್ನ ಮೇಲೆ ಬಿದ್ದಿದೆ ಎಂದು ಲಖನ್ಪಾಲ್ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಚಿಕಿತ್ಸೆಗಾಗಿ ಸಿಎಂ ಡಿಸ್ಕ್ರಿಷನರಿ ಫಂಡ್ನಿಂದ 75 ಸಾವಿರ ರೂಪಾಯಿ ನೀಡಲಾಗಿದ್ದರೂ, ಅದು ಸಾಕಾಗುತ್ತಿಲ್ಲ ಎಂದಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಮನೀಶ್ ಕುಮಾರ್ ಅವರ ಲಖನೌ ವಿಭಾಗೀಯ ಪೀಠವು, ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ (ಕೆಜಿಎಂಯು)ಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಬುಧವಾರ ಆದೇಶ ಹೊರಡಿಸಿದೆ. ಡಾ.ರಾಮ ಮನೋಹರ ಲೋಹಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಮತ್ತು ಎಸ್ಜಿಪಿಜಿಐಎಂಎಸ್ ಸಂಸ್ಥೆಗಳಿಗೂ ಚಿಕಿತ್ಸೆಯಲ್ಲಿ ಸಹಕಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಮಾರ್ಚ್ 24 ರ ವೇಳೆಗೆ ಮಹಿಳೆಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವಂತೆ ಕೆಜಿಎಂಯು ಚೀಫ್ ಸೂಪರಿಂಟೆಂಡೆಂಟ್ ಅಧಿಕಾರಿಗೆ ತಿಳಿಸಿದೆ.(ಏಜೆನ್ಸೀಸ್)
ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ
ಹೊಸ ಕೃಷಿ ಕಾಯ್ದೆ ಐಚ್ಛಿಕ: ಹಳೇ ವ್ಯವಸ್ಥೆಯೂ ಮುಂದುವರಿಕೆ, ಆಯ್ಕೆ ರೈತರಿಗೆ ಸೇರಿದ್ದು…