ಕಾಸರಗೋಡು: ಸ್ವಾತಂತ್ರೃದ ಅಮೃತ ಮಹೋತ್ಸವ ಸಂದರ್ಭ ದೇಶದ ವಿವಿಧೆಡೆ ಉಗ್ರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸರು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದಾರೆ.
ಎಲ್ಲ ರೈಲು ನಿಲ್ದಾಣ, ಜನದಟ್ಟಣೆಯಿರುವ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಪೊಲೀಸ್, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ತಪಾಸಣೆ ನಡೆಸುತ್ತಿವೆ. ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್), ರೈಲ್ವೆ ಪೊಲೀಸರೂ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಪೊಲೀಸ್ ಶ್ವಾನದಳ ಕೆ-9 ಸ್ಕ್ವಾಡ್ನ ಚಾರ್ಲಿ ಹಾಗೂ ಬಡ್ಡಿ ಹೆಸರಿನ ಎರಡು ಶ್ವಾನಗಳು ತಪಾಸಣೆ ನಡೆಸುತ್ತಿವೆ. ನಿಲ್ದಾಣಕ್ಕೆ ಆಗಮಿಸುವ ರೈಲುಗಳು, ಸಾಮಗ್ರಿಗಳನ್ನು ತಪಾಸಣೆ ನಡೆಸಿ, ಅಪರಿಚಿತರ ಮೇಲೆ ನಿಗಾ ವಹಿಸಲಾಗುತ್ತಿದೆ.
ಸ್ವಾತಂತ್ರ್ಯೋತ್ಸವ ಸಮಾರಂಭ ಸಮಾಪ್ತಿಗೊಳ್ಳುವವರೆಗೂ ತಪಾಸಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾವಳಿ ಪ್ರದೇಶದಲ್ಲೂ ತಪಾಸಣೆ ಚುರುಕುಗೊಳಿಸಲಾಗಿದೆ.