ದುರ್ಗಾದೇವಿ ಜಾತ್ರೆಯ ಶಾಂತಿ ಸಭೆ
ಹಟ್ಟಿಚಿನ್ನದಗಣಿ: ಈ ಬಾರಿ ದುರ್ಗಾದೇವಿ ಜಾತ್ರಾ ಮಹೋತ್ಸವವನ್ನು ಪೂಜೆಗೆ ಮಾತ್ರ ಸೀಮಿತಗೊಳಿಸಬೇಕು. ಗ್ರಾಮದ ಜನ ಸಂಯಮದಿಂದ ಸಹಕರಿಸಬೇಕು. ಹದ್ದು ಮೀರಿ ವರ್ತಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಚಾಮರಾಜ್ ಪಾಟೀಲ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಪೊಲೀಸ್ ಠಾಣೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಮಂಗಳವಾರ ದುರ್ಗಾದೇವಿ ಜಾತ್ರಾ ಮಹೋತ್ಸವ ಇದೆ. ಆದರೆ, ಹಟ್ಟಿ ಪಟ್ಟಣದಲ್ಲಿ ಕರೊನಾ ಉಲ್ಬಣಗೊಂಡಿದೆ. ಅಧಿಕ ಸಾವು ಸಂಭವಿಸಿವೆ. ಜನರ ಭಕ್ತಿಗೆ ನಮ್ಮ ವಿರೋಧವಿಲ್ಲ. ಆದರೆ, ಕರೊನಾ ಸಂಕಷ್ಟದಲ್ಲಿ ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕಿದೆ. ಭಕ್ತರೆಲ್ಲ ದೇವಸ್ಥಾನಕ್ಕೆ ಬಾರದೇ, ಮನೆಯಲ್ಲ್ಲೇ ದೇವಿಗೆ ಕೈ ಮುಗಿದು ಜಾತ್ರೆ ಮಾಡಿಕೊಳ್ಳಿ ಎಂದರು.
ಅಂದು ದೇವಸ್ಥಾನದ ಒಳಗೆ ಹೋಗಲು ಅರ್ಚಕರು, ಗ್ರಾಮದ ಪ್ರಮುಖ ನಾಲ್ಕು ವ್ಯಕ್ತಿಗಳಿಗೆ ಮಾತ ಅವಕಾಶ ನೀಡಲಾಗುವುದು. ಅವರಷ್ಟೇ ಗುಡಿ ಪ್ರವೇಶಿಸಿ ಪೂಜೆ, ಪುನಸ್ಕಾರ ಮುಗಿಸಿಕೊಂಡು ಬರಬೇಕು ಎಂದರು.
ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐ ಮುದ್ದುರಂಗಸ್ವಾಮಿ, ಪಪಂ ಮುಖ್ಯಾಧಿಕಾರಿ ಪ್ರವೀಣ ಬೊಗಾರ್, ಮುಖಂಡರಾದ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಎನ್.ಸ್ವಾಮಿ ನಾಯಿಕೊಡಿ, ಸೈಯದ್ ಶಂಶುದ್ದೀನ್ ಮೊದಲಾದವರು ತಹಸೀಲ್ದಾರ್ ಮಾತಿಗೆ ಸಮ್ಮತಿ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಎಂ.ಲಿಂಗರಾಜ್, ಮುಖಂಡರಾದ ಹನುಮಂತರೆಡ್ಡಿ ಭೋವಿ, ಮಹ್ಮದ್ ಅಮ್ಜದ್ ಸೇಠ್, ಕೈಸರ್ ಸಿದ್ದಿಕಿ, ಬಾಲಪ್ಪ ನಾಯಕ, ಗುಂಡಪ್ಪಗೌಡ ಗುರಿಕಾರ, ಬುಜ್ಜಾ ನಾಯಕ, ಸುನೀಲ್, ಬಸವರಾಜ ಗಲಗ ಇದ್ದರು.