ಹರಪನಹಳ್ಳಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿದ್ದಕ್ಕಾಗಿ ಪಟ್ಟಣದಲ್ಲಿ ಪರಿಶಿಷ್ಟ ಸಮುದಾಯದವರು ವಿವಿಧ ಗಣ್ಯರು ಭಾವಚಿತ್ರಗಳಿಗೆ ಸೋಮವಾರ ಕ್ಷೀರಾಭಿಷೇಕ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಹೈಮಾಸ್ಕ್ ದೀಪದ ಕೆಳಗೆ ಡಾ.ಬಿ.ಆರ್.ಅಂಬೇಡ್ಕರ್, ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ಮೊದಲಾದ ಭಾವಚಿತ್ರಗಳನ್ನು ಇರಿಸಿ, ಹಾಲಿನಿಂದ ಎರೆಯುವ ಮೂಲಕ ವಿಜಯೋತ್ಸವ ಆಚರಿಸಿದರು.
ನಂತರ ಹೊಸಪೇಟೆ ರಸ್ತೆ ಮಾರ್ಗವಾಗಿ ಮೆರವಣಿಗೆ ಮೂಲಕ ಪುರಸಭೆ ಕಚೇರಿಗೆ ತೆರಳಿ ಪ್ರವಾಸಿ ಮಂದಿರ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಮನವಿ ಸಲ್ಲಿಸಿದರು.
ಮುಖಂಡ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಒಳ ಮೀಸಲಾತಿ ಜಾರಿಗೆ 20 ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬರಲಾಗಿತ್ತು. ಈವರೆಗೆ ಯಾವ ಸರ್ಕಾರದಿಂದಲೂ ಸ್ಪಂದನೆ ಸಿಕ್ಕಿಲ್ಲ. ಈಗ ಬಿಜೆಪಿ ಸ್ಪಂದಿಸಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಒಂದು ಜಾರಿ, ಜನಾಂಗಕ್ಕೆ ಸೀಮಿತವಾದವರಲ್ಲ. ವಿಶ್ವಕ್ಕೆ ಮಾದರಿ ನಾಯಕ. ಭಾರತದ ಸಂವಿಧಾನ ಶಿಲ್ಪಿ. ಅಂತಹವರ ಹೆಸರನ್ನು ಐ.ಬಿ.ವೃತ್ತಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದರು.
ಪ್ರಮುಖರಾದ ಯು.ಚಂದ್ರಪ್ಪ, ಭಂಗಿ ರಾಮಪ್ಪ, ಹಾಲಪ್ಪ, ಪರಶುರಾಮ, ಎಂ.ರಮೇಶ್, ಚಾರ್ಯಪ್ಪ, ಕೆ.ಮಂಜುನಾಥ, ಸುರೇಶ್ ಇತರರು ಇದ್ದರು.