ಬೆಂಗಳೂರು: ಕುಶಲಕರ್ಮಿಗಳಾಗಬೇಕು, ಅದೇ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಕಟ್ಟಬೇಕು ಎನ್ನುವವರಿಗಾಗಿ ಇಂಡಿಯನ್ ಮನಿ ಡಾಟ್ ಕಾಂನಿಂದ ಕನ್ನಡದಲ್ಲೇ ಫೈನಾನ್ಶಿಯಲ್ ಫ್ರೀಡಂ ಆ್ಯಪ್ನಲ್ಲಿ ಹ್ಯಾಂಡಿ ಕ್ರಾಫ್ಟ್ಸ್ ಕೋರ್ಸ್ ಆರಂಭಿಸಲಾಗಿದೆ.
ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ ಈ ಕೊರ್ಸ್ನ್ನು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ನಿಂದಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈಗ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಬದಲು ಉದ್ಯಮಿಗಳಾಗುವ ಬಗ್ಗೆ ಯೋಚಿಸಬೇಕಿದೆ. ಉದ್ಯಮಿಗಳ ಸಂಖ್ಯೆ ಹೆಚ್ಚಿದಷ್ಟು ಆರ್ಥಿಕ ಚಟುವಟಿಕೆ ಹೆಚ್ಚುವ ಜತೆಗೆ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆ ಸರಿದಾರಿಗೆ ಬರಲಿದೆ ಎಂದು ಹೇಳಿದರು.
ಕುಶಲಕರ್ಮಿಗಳಾಗಲು ಬಯಸುವವರಿಗೆ ಪ್ರತ್ಯೇಕವಾಗಿ ಕನ್ನಡದಲ್ಲಿ ಹ್ಯಾಂಡಿಕ್ರಾಫ್ಟ್ಸ್ ಕೋರ್ಸ್ನ್ನು ವಿನ್ಯಾಸಗೊಳಿಸಿರುವುದು ಅರ್ಥಪೂರ್ಣವಾಗಿದೆ. ಈ ಕೋರ್ಸ್ನಲ್ಲಿ ಹಂತ ಹಂತವಾಗಿ ಎಲ್ಲವನ್ನೂ ವಿವರಿಸಲಾಗಿದೆ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು, ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರು ಕೂಡ ಈ ಕೋರ್ಸ್ನ ಅನುಕೂಲ ಪಡೆಯಬಹುದು. ಉತ್ಸಾಹಿ ಯುವಕರು ಈ ರೀತಿಯ ಕಲಿಕೆ ಆ್ಯಪ್ಗಳ ಸಹಾಯದಿಂದ ಹೊಸ ಉದ್ಯಮಗಳನ್ನು ಸ್ಥಾಪಿಸಲು ಜ್ಞಾನ ಸಂಪಾದಿಸಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಮನಿ ಡಾಟ್ ಕಾಂ ನ ಸಿಇಒ ಸಿ.ಎಸ್. ಸುಧೀರ್, ಕರಕುಶಲ ಉದ್ಯಮಕ್ಕೆ ಜಾಗತಿಕವಾಗಿ ರೂ.75 ಲಕ್ಷ ಕೋಟಿ ಮಾರುಕಟ್ಟೆ ಇದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ಪಾಲು 45,000 ಕೋಟಿ ಮಾತ್ರ. ಈ ಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಫೈನಾನ್ಶಿಯಲ್ ಫ್ರೀಡಂ ಆ್ಯಪ್ ನಲ್ಲಿ ಹ್ಯಾಂಡಿ ಕ್ರಾಫ್ಟ್ಸ್ ಕೋರ್ಸ್ ವಿನ್ಯಾಸ ಮಾಡಲಾಗಿದೆ. ಪ್ರಾದೇಶಿಕ ಭಾಷೆಯಲ್ಲೇ ಕೋರ್ಸ್ ಇರುವುದರಿಂದ ಎಲ್ಲರಿಗೂ ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ ಉದ್ಯಮಶೀಲತೆ ಹೆಚ್ಚಿಸುವುದೇ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಶಿಯಲ್ ಫ್ರೀಡಂ ಆ್ಯಪ್ನ ಉದ್ದೇಶ ಎಂದು ವಿವರಿಸಿದರು.
VIDEO| ಹಾಲುಕುಡಿಯುತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಶ್ವಾನಮರಿಗಳನ್ನ ಹೊತ್ತೊಯ್ದ ಚಿರತೆ!