ಬ್ರಹ್ಮಾವರ: ಐತಿಹಾಸಿಕ ದೇವಸ್ಥಾನ ಶಿಲಾಮಯವಾಗಿ ರೂಪುಗೊಂಡ ಹಂದಾಡಿ ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏ.5ರಂದು ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಕ್ರವಾರ ಸಂಜೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ದೇವಸ್ಥಾನದ ರಥಬೀದಿ ಮೂಲಕ ಆಕಾಶವಾಣಿ ವೃತ್ತದಿಂದ 3 ಕಿ.ಮೀ ದೂರದ ಹಂದಾಡಿಗೆ ನೂರಾರು ವಾಹನಗಳಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ ಡೋಲು, ಚೆಂಡೆ ವಾದನ, ಕಲಶ, ಭಜನಾ ನೃತ್ಯ, ಕೀಲು ಕುದುರೆ, ಬೊಂಬೆ ಕುಣಿತದ ಜತೆಯಲ್ಲಿ ಸಾಗಿಬಂತು. ಮುದ್ದು ಬಾಲಕೃಷ್ಣನ ವೇಷ ಮತ್ತು ಅಷ್ಟ ಲಕ್ಷ್ಮೀಯರ ಟ್ಯಾಬ್ಲೊ ಗಮನ ಸೆಳೆಯಿತು.
ಸಮಿತಿ ಪದಾಧಿಕಾರಿಗಳಾದ ಸಂತೋಷ ಶೆಟ್ಟಿ, ಹಂದಾಡಿ ದೊಡ್ಡಮನೆ ಮೋಹನ ಉಡುಪ, ರವಿ ಶೆಟ್ಟಿ, ರಾಜೇಶ್ ಶೆಟ್ಟಿ ಬಿರ್ತಿ, ಸಮಿತಿಯ ಸದಸ್ಯರು ಮತ್ತು ಹಂದಾಡಿ ನಾಲ್ಕು ಮನೆಯವರು, ಸಹಸ್ರಾರು ಮಂದಿ ಇದ್ದರು.