ತುಮಕೂರು: ಅಂತರ್ಜಲ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ ಯೋಜನೆಗೆ ಸಂಬಂಧಿಸಿದ ನಿಖರ ಮಾಹಿತಿಯ ವರದಿಯನ್ನು ಮಾ.26ರೊಳಗೆ ನೀಡುವಂತೆ ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಮಹಾನಗರ ಪಾಲಿಕೆ ಸ್ಮಾರ್ಟ್ ಕಂಟ್ರೋಲ್ ರೂಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ‘ಜಲಶಕ್ತಿ ಯೋಜನೆ ಡೇಟಾ ಸಂಗ್ರಹಣೆ’ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಲಶಕ್ತಿ ಯೋಜನೆಗೆ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಡೇಟಾ ಸಂಗ್ರಹಿಸಲು ಹತ್ತು ನಗರಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ತುಮಕೂರು ನಗರವೂ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ಹತ್ತು ನಗರಗಳೂ ತಮ್ಮ ವ್ಯಾಪ್ತಿಯಲ್ಲಿನ ಅಂತರ್ಜಲಕ್ಕೆ ಸಂಬಂಧಿಸಿದ ಅಂತರ್ಜಲ ಅಭಿವೃದ್ಧಿ, ಕುಡಿಯುವ ನೀರು, ಕೊಳಚೆ ನೀರು, ನೀರಿನ ಮೂಲಗಳು, ಬೋರ್ವೆಲ್ಗಳು, ನೆರೆ ನಿಯಂತ್ರಣ ಹೀಗೆ ಎಲ್ಲವನ್ನೂ ಕ್ರೂಢೀಕರಿಸಿ ನೀರಿನ ಪ್ರತಿಯೊಂದು ಯೋಜನೆ ರೂಪಿಸಲು ಕೈಗೊಳ್ಳಲಾಗುವುದು ಎಂದರು.
ತುಮಕೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಮಾರ್ಟ್ಸಿಟಿ. ಕೊಳಚೆ ಮತ್ತು ಒಳಚರಂಡಿ ನೀರು ಸರಬರಾಜು ಮಂಡಳಿ, ಕಂದಾಯ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ತುಮಕೂರಿನ ಅಂತರ್ಜಲ ಕುರಿತು ವಿಶೇಷ ಅಧ್ಯಯನ ಮಾಡಬೇಕು. ಅಂತರ್ಜಲ ಅಭಿವೃದ್ಧಿಗಾಗಿ ಎಲ್ಲೆಲ್ಲಿ ಏನೇನಾಗಿದೆ, ಇನ್ನೂ ಏನೇನು ಆಗಬೇಕು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ 26ರೊಳಗೆ ಮಾಹಿತಿ ನೀಡಬೇಕು ಎಂದರು.
ರಾಜಗಾಲುವೆಗಳ ಒತ್ತುವರಿ ಬಗ್ಗೆಯೂ ಸಂಪೂರ್ಣ ಮಾಹಿತಿ ಒದಗಿಸಬೇಕು. ಬೋರ್ವೆಲ್ ಮರುಪೂರಣ, ನಗರದಲ್ಲಿನ ಕೊಳಚೆ ನೀರು ಯಾವ್ಯಾವ ಕೆರೆ-ಕಟ್ಟೆಗೆ ಹೋಗುತ್ತದೆ ಎಂಬ ಬಗ್ಗೆ ಸಂಪೂರ್ಣ ಸರ್ವೆ ಮಾಡಬೇಕು. ಆಯಾ ಇಲಾಖೆಯವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.