ಬೆಂಗಳೂರು: ಬಹುತೇಕ ನಿವಾಸಿಗರು ಕನ್ನಡೇತರರೇ ಆಗಿರುವ ಬೆಂಗಳೂರಿನ ಪೂರ್ವ ಸ್ಕೈವುಡ್ ವಸತಿ ಸಮುಚ್ಚಯದಲ್ಲಿ ಕನ್ನಡ ಕಲರವ ಮುಗಿಲು ಮುಟ್ಟುವಂತೆ ರಾಜ್ಯೋತ್ಸವ ಆಚರಣೆ ನಡೆಯಿತು. ಈ ವಸತಿ ಸಮುಚ್ಚಯದ ಕನ್ನಡೇತರರು, ಕನ್ನಡಿಗರಿಗೆ ಸರಿಸಮವಾಗಿ ನಿಂತು ಈ ಹಬ್ಬವನ್ನು ನಡೆಸಿಕೊಟ್ಟಿದ್ದು, ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದು ಈ ಸಂದರ್ಭದ ವಿಶೇಷತೆಯಾಗಿತ್ತು.
ನವೆಂಬರ್ 19 ಮತ್ತು 20ರಂದು ಒಟ್ಟು ಎರಡು ದಿನಗಳ ಕಾಲ ಕೂಡ್ಲು ಸಮೀಪವಿರುವ ಪೂರ್ವ ಸ್ಕೈವುಡ್ ವಸತಿ ಸಮುಚ್ಚಯದಲ್ಲಿ ನಡೆದ ’ಕನ್ನಡ ಹಬ್ಬ’ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ, ಜನಪದ, ಗ್ರಾಮೀಣ ಆಟಗಳು, ಪಾಕ ವಿಧಾನ ಹೀಗೆ ಎಲ್ಲ ನಿಟ್ಟಿನಿಂದಲೂ ಕನ್ನಡ-ಕರ್ನಾಟಕವನ್ನು ಪ್ರತಿನಿಧಿಸಿತು.
ಮೊದಲನೆಯ ದಿನ ಕರ್ನಾಟಕ ಧ್ವಜಾರೋಹಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡೇತರರು ಭಾಗವಹಿಸಿ ಕನ್ನಡ ಹಾಡು, ನಾಟಕ, ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿ ಸಾವಿರಾರು ಜನರಿಗೆ ಮನರಂಜನೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ನಮ್ಮ ನೆಲದವರೇ ಆದ ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ಕಿತ್ತೂರಿನ ಚೆನ್ನಮ್ಮ, ಸರ್.ಎಂ.ವಿ, ಕುಂಬ್ಳೆ, ಡಾ.ರಾಜ್ ಹಾಗೂ ಅಪ್ಪು ಮುಂತಾದವರ ದಿರಿಸು ಧರಿಸಿ, ಅವರಂತೆ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ ಪುಟಾಣಿಗಳು ಕಣ್ಣಿಗೆ ಹಬ್ಬವಾಗಿದ್ದರು. ಪೂಜಾ ಹೆಗಡೆ ನೇತೃತ್ವದ ಉಡುಪಿಯ ವಿದ್ಯಾರ್ಥಿಗಳ ’ದುರ್ಗಾಂಬಿಕಾ ತಂಡ’ವು ಪ್ರದರ್ಶಿಸಿದ ಜನಪದ ನೃತ್ಯ, ಪೂಜಾಕುಣಿತ ಪ್ರೇಕ್ಷಕರನ್ನು ಸೆಳೆಯಿತು.
ಎರಡನೆಯ ದಿನ ವಸತಿ ಸಮುಚ್ಚಯದ ನಿವಾಸಿಗಳಿಗಾಗಿ ನಡೆಸಿದ ವಿವಿಧ ಗ್ರಾಮೀಣ ಆಟದ ಸ್ಪರ್ಧೆಗಳಲ್ಲಿ ಎಳೆಯ ಮಕ್ಕಳಿನಿಂದ ಎಂಬತ್ತರ ಹರಯದವರೂ ಭಾಗವಹಿಸಿದರು. ಮಧ್ಯಾಹ್ನ ರಾಜ್ಯದ ವಿಶೇಷ ತಿಂಡಿ ತಿನಿಸುಗಳನ್ನು ಒಳಗೊಂಡ ಔತಣವನ್ನು ನಿವಾಸಿಗಳು ಸವಿದರು.
ಈ ಎರಡೂ ದಿನ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ನಿವಾಸಿಗಳ ಜೊತೆಜೊತೆಯಲ್ಲೇ ಸಮುಚ್ಚಯದ ಸ್ವಚ್ಛತೆ ನೋಡಿಕೊಳ್ಳುವ ಕೆಲಸದವರೂ (ಹೌಸ್ ಕೀಪಿಂಗ್), ಪ್ಲಂಬಿಂಗ್ – ಇಲೆಕ್ಟ್ರಿಕಲ್ ವಿಭಾಗ, ಉದ್ಯಾನವನದ ಕೆಲಸಗಾರರು, ಎಲ್ಲ ಬೆಂಬಲ ಸಿಬ್ಬಂದಿಯೂ ಭಾಗಿಯಾಗಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ: 2 ವಾರಕ್ಕೆ ಮೊದಲು ಹೀಗೆ ಮಾಡಿ; ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ