ಬೆಂಗಳೂರು: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸುವ “ಗ್ರಾಮ ಒನ್” ಕೇಂದ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.
ದಾವಣಗೆರೆ ಜಿಲ್ಲೆಯ 100 ಗ್ರಾಮಗಳಲ್ಲಿ ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರುವ ಪ್ರಾಯೋಗಿಕ ಯೋಜನೆ ಇದಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಒನ್ ಕೇಂದ್ರವು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮೈಕ್ರೋ-ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಮತ್ತಷ್ಟು ಸೇವೆಗಳನ್ನು ಗ್ರಾಮ ಒನ್ ಕೇಂದ್ರಗಳಲ್ಲಿ ನೀಡಲು ಉದ್ದೇಶಿಸಿದೆ ಎಂದು ಸಿಎಂ ತಿಳಿಸಿದರು.
ಗ್ರಾಮ ಒನ್ನಲ್ಲಿ ಲಭ್ಯವಿರುವ ಸೇವೆಗಳು
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ವೃದ್ಧಾಪ್ಯ ವೇತನ&ವಿಧವಾ ವೇತನ
- ಅಂಗವಿಕಲ ವೇತನ
- ಸಂಧ್ಯಾ ಸುರಾ ಯೋಜನೆ
- ಹಿರಿಯ ನಾಗರಿಕರ ಗುರುತಿನ ಚೀಟಿ
- ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್
- ಕಾರ್ಮಿಕ ಇಲಾಖೆ ಸೇವೆಗಳು
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇವೆಗಳು
- ಕೃಷಿ, ರೇಷ್ಮೆ,ಪಶು ಸಂಗೋಪನೆ ಇಲಾಖೆ ಸೇವೆಗಳು
- ಮಾಹಿತಿ ಹಕ್ಕು ಕಾಯ್ದೆ ಸೇವೆಗಳು
- ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇವೆಗಳು ಹಾಗೂ 750ಕ್ಕೂ ಹೆಚ್ಚು ನಾಗರಿಕ ಸೇವೆಗಳು
ಇನ್ನಷ್ಟು ಸೇವೆ: ಸೇವಾಸಿಂಧು ಅಡಿಲಭ್ಯವಿರುವ ಸೇವೆಗಳು, ಸಕಾಲ ಸೇವೆಗಳು, ಸಕಾಲ ಮೇಲ್ಮನವಿ, ರಾಜ್ಯದ ವಿವಿಧ ಕೃಷಿ ಮಾರುಕಟ್ಟೆ / ಮಂಡಿ ದರಗಳ ಮಾಹಿತಿ, ಮೈಕ್ರೋ ಬ್ಯಾಂಕಿಂಗ್, ಮಾಹಿತಿ ಹಕ್ಕು ಅಧಿನಿಯಮದಡಿ ಆನ್ಲೈನ್ ಅರ್ಜಿ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ಧರಿಸುವ ಇತರೆ ಸೇವೆಗಳನ್ನೂ ಪಡೆಯಬಹುದು.
ಸಹಾಯವಾಣಿ: 080-44554455
ಸರ್ಕಾರಿ ಸೇವೆಗಳು ಸಕಾಲಕ್ಕೆ ನಾಗರಿಕರಿಗೆ ತಲುಪಬೇಕೆನ್ನುವ ಸದಾಶಯದೊಂದಿಗೆ ಸಕಾಲ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಸಮಯಬದ್ಧ ಸೇವೆಗಳನ್ನು ತಂತ್ರಾಜ್ಞಾನ ಬಳಕೆಯಿಂದ ನೀಡಲು ಸಾಧ್ಯವಿದೆ. ಹಾಗಾಗಿ ಗ್ರಾಮ ಒನ್ ಕೇಂದ್ರಗಳು ಜನಸ್ನೇಹಿ ಕೇಂದ್ರ ಆಗುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ಯಡಿಯೂರಪ್ಪ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ಸೇವೆಗಳನ್ನು ಗ್ರಾಮ ಒನ್ ಕೇಂದ್ರದಲ್ಲೇ ಪಡೆಯಬಹುದು. ಆ ಮೂಲಕ ಸಾರ್ವಜನಿಕರ ಸಮಯ ಮತ್ತು ಹಣ ಉಳಿಯಲಿದೆ. ಈ ಕೇಂದ್ರಗಳ ಸ್ಥಾಪನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಮಾಯಗೊಂಡನಹಳ್ಳಿಯಲ್ಲಿ ಗ್ರಾಮ ಒನ್ಗೆ ಸಚಿವ ಎಸ್. ಸುರೇಶ್ ಕುಮಾರ್ ಚಾಲನೆ ನೀಡಿದರು.
ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು! ಕರ್ನಾಟಕದ ಈ ಸ್ಥಳಕ್ಕೆ ಕಾಲಿಟ್ಟರೆ ಮಿಂಚಲಿದೆ ನೀಲಿ ಬಣ್ಣದ ಹೆಜ್ಜೆ ಗುರುತು
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ರದ್ದು! ಇದು ಹೈಕೋರ್ಟ್ ಆದೇಶ