More

    ಸರ್ಕಾರಿ ವ್ಯವಸ್ಥೆ ಸಾಮಾನ್ಯರಿಗೆ ತಲುಪಲು ತಂತ್ರಜ್ಞಾನ-ಸೇವಾ ಮನೋಭಾವ ಅಗತ್ಯ: ಸಿಎಂ ಬೊಮ್ಮಾಯಿ

    ಬೆಂಗಳೂರು: ತಂತ್ರಜ್ಞಾನ ಮತ್ತು ಸೇವಾ ಮನೋಭಾವ ಜೊತೆಗೂಡಿದರೆ ದೇಶದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದ ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿಸಲು ಸಾಧ್ಯ ಎನ್ನುವುದನ್ನು ಗ್ರಾಮ ಒನ್ ಕಾರ್ಯಕ್ರಮದ ಯಶಸ್ಸು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ವಿಕಾಸಸೌಧದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮ ಒನ್ ಯೋಜನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದಾದರೂ ಒಂದು ವ್ಯವಸ್ಥೆಗೆ ಚಲನಾಶೀಲವಾದ ಶಕ್ತಿ ಇದ್ದರೆ ವೇಗವಾಗಿ ಮುಂದುವರಿಸಿಕೊಂಡು ಹೋಗಬಹುದು. ನಿಂತಲ್ಲೇ ನಿಂತರೆ ತುಕ್ಕು ಹಿಡಿಯುತ್ತದೆ. ಸರ್ಕಾರದ ಚಕ್ರ ನಿರಂತರವಾಗಿ ಚಲಿಸಲು ಕೆಳಹಂತದ ಕೆಲಸಗಳು ಸರಿಯಾಗಿ ನಡೆಯಬೇಕು. ಜನರ ಬೇಕುಬೇಡಗಳ ಆಧಾರದ ಮೇಲೆ ಬಹಳಷ್ಟು ಸೇವೆಗಳು ಒದಗಿಸಲಾಗುತ್ತಿದೆ ಎಂದರು.

    ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ

    ಸರ್ಕಾರ ತನ್ನ ವ್ಯವಸ್ಥೆಯಲ್ಲಿದ್ದ ಕೆಲವು ಅಧಿಕಾರವನ್ನು ನೀಡಲಾಗಿದೆ. ವ್ಯವಸ್ಥೆ ಯಶಸ್ವಿಯಾಗಲು ಸೇವಾ ಮನೋಭಾವ ಮುಖ್ಯ. ಮನೆ ಮನೆಗೆ ಸೇವೆ ತಲುಪಿಸುವ ಉದ್ದೇಶದಿಂದ ಯೋಜನೆ ಜಾರಿಯಾಗಿದ್ದು, ಸೇವೆ ಸೇವೆಯಾಗಿಯೇ ಉಳಿಯಬೇಕು. ಸೇವಾ ಮನೋಭಾವದಿಂದ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಜನರು ಹಳೆಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ಸೇವೆಗೆ, ಜೀವನೋಪಾಯಕ್ಕೆ ಅವಕಾಶವಾಗಿದೆ. ಜ್ಞಾನಾರ್ಜನೆಗೆ ಕೂಡ ಮೂಲವಾಗಿದೆ. ಸೇವೆಗಳನ್ನು ನೀಡಲು ನಿಮ್ಮನ್ನು ಸಬಲರಾಗಿಸಲಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಬೇಕು. ಜ್ಞಾನವಿದ್ದಲ್ಲಿ ಸಬಲೀಕರಣವಾಗುತ್ತದೆ ಎಂದರು.

    ಇದನ್ನೂ ಓದಿ: ವಿಜ್ಞಾನಿಗಳಿಂದಷ್ಟೇ ಅಲ್ಲ, ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ; ದೇಶಕ್ಕೆ ಕಾದಿದ್ಯಾ ಭಾರಿ ಗಂಡಾಂತರ?

    ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಜಾರಿಯಲ್ಲಿದೆ. ಗ್ರಾಮ ಒನ್ ಕೇಂದ್ರದಿಂದ ಬಂದ ಅರ್ಜಿಗಳು ವಿಲೇವಾರಿ ಆಗಲು ವಿಳಂಬವಾದರೆ ತಹಸೀಲ್ದಾರ್ ಕಚೇರಿಗೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ, ವೇಗವಾಗಿ ಕೆಲಸ ಮಾಡಬೇಕು ಎಂದರು.

    ಜನಸ್ನೇಹಿ ಕೆಲಸದಿಂದಾಗಿ ಮೂಡಿದೆ ವಿಶ್ವಾಸ

    ಗ್ರಾಮ ಒನ್​ನಿಂದ ಉತ್ತಮ ಕೆಲಸಗಳಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವುದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಒಂದು ವರ್ಷದಲ್ಲಿ ಒಂದೂವರೆ ಕೋಟಿಯಾಗಿರುವ ಮುಂದಿನ ವರ್ಷದಲ್ಲಿ ಮೂರು ಕೋಟಿ ತಲುಪುವ ಗುರಿಯನ್ನು ಹಾಕಿಕೊಳ್ಳಬೇಕು. ಜನಪರವಾಗಿರುವ, ಜನರಿಗಾಗಿ ವ್ಯವಸ್ಥೆ ಆಗಬೇಕು. ವ್ಯಾಪಕವಾಗಿ, ಯಶಸ್ವಿಯಾಗಿ, ಸಮರ್ಪಕವಾಗಿ ಕೆಲಸಗಳಾದಾಗ ಒಂದು ವ್ಯವಸ್ಥೆ ನಿರ್ಮಾಣವಾಗುತ್ತದೆ. ಅಂಥ ವ್ಯವಸ್ಥೆಯನ್ನು ಎಲ್ಲರೂ ಹುಟ್ಟುಹಾಕಬೇಕೆಂದು ಕರೆ ನೀಡಿದರು.

    Grama One Anniversaryಗ್ರಾಮ ಒನ್ ಕ್ರಾಂತಿಕಾರಿ ಯೋಜನೆ

    ಗ್ರಾಮ ಒನ್​ಗೆ ಅರ್ಥಿಕವಾಗಿ ಇನ್ನಷ್ಟು ಬಲ‌ ಕೊಡುವ ಕೆಲಸ ಮಾಡಲಾಗುವುದು. ತಂತ್ರಜ್ಞಾನ ‌ಕ್ರಾಂತಿಯಾಗಿದೆ. ಜನರಿಗೆ ಸರಳವಾಗಿ ಸೇವೆಗಳು ಸಿಗುವಂತೆ‌ ಮಾಡಲಾಗುವುದು‌. ಗ್ರಾಮ ಒನ್ ಕೇಂದ್ರಗಳಲ್ಲಿ ಇನ್ನಷ್ಟು ಸೇವೆಗಳು, ಅಂತರ್ಜಾಲಕ್ಕೆ ವೇಗ, ಮೆಮೊರಿ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಒನ್ ಕ್ರಾಂತಿಕಾರಿ ಯೋಜನೆ. ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದೆ ಎಂದರು.

    ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಒನ್ ಅನಿವಾರ್ಯ

    ಗ್ರಾಮ ಒನ್ ಸೇವೆಯಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಗ್ರಾಮ ಒನ್ ಕಾರ್ಯಕರ್ತರ ಪರಿಶ್ರಮದಿಂದ, ವಿನೂತನವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಮಯಕ್ಕೆ ತಕ್ಕ ಸ್ಪಂದನೆ, ಉತ್ಸಾಹ, ಪರಿಶ್ರಮದಿಂದ ಆಡಳಿತ ವ್ಯವಸ್ಥೆ ಯಶಸ್ವಿಯಾಗುತ್ತದೆ. ಮುಂದಿನ ಐದು ವರ್ಷದಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಒನ್ ಅನಿವಾರ್ಯವಾಗಲಿದೆ. ಗ್ರಾಮ ಒನ್​ಗೆ ಶಕ್ತಿ ತುಂಬಲಾಗುವುದು. ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವುದು ಸರ್ಕಾರದ ಗುರಿ ಎಂದರು.

    ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಯಾರು?; ಇದೊಂದೇ ಪ್ರಶ್ನೆಗೆ ಯುವಕರ ಮಧ್ಯ ಮಾರಾಮಾರಿ, ಕೊಲೆ ಬೆದರಿಕೆ

    ಬಡವರ ಸೇವೆಗೆ ಆದ್ಯತೆ ನೀಡಿ

    ಗ್ರಾಮ ಒನ್ ವ್ಯವಸ್ಥೆಯಲ್ಲಿ ಬಹಳಷ್ಟು ಜನರ ಪರಿಶ್ರಮವಿದೆ. ನಿಮ್ಮ ಮಟ್ಟದಲ್ಲಿ ಸೇವೆಯನ್ನು ಸುಧಾರಿಸಿ ಉತ್ತಮಗೊಳಿಸಲು ಪ್ರಯತ್ನಿಸಿ. ನಿಮ್ಮ ದಿನಿನಿತ್ಯದ ಕೆಲಸದೊಂದಿಗೆ ಕನಿಷ್ಠ ಶೇ.10 ಹೆಚ್ಚು ಕೆಲಸವನ್ನು ಮಾಡಲು ಪ್ರಯತ್ನಿಸಿ, ಹೊಸ ಸೇವೆಗಳನ್ನು ಗ್ರಾಮ ಒನ್ ಸೇವೆಯಲ್ಲಿ ಸೇರಿಸಲು ಪ್ರಯತ್ನಿಸಿ. ಸಮಾಜದಲ್ಲಿ ಸರ್ಕಾರ ಮತ್ತು ಜನರ ನಡುವೆ ಸೇತುವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಯುವ ಪಡೆ ನೀವಾಗಿದ್ದೀರಿ. ಕೆಲಸವನ್ನು ಮಾಡದಿರಲು ನೂರಾರು ಕಾರಣಗಳಿರಬಹುದು. ಆದರೆ ಬಡವರಿಗೆ ಸೇವೆ ಸಲ್ಲಿಸಲು ಒಂದು ಸಕಾರಣ ಸಾಕು. ಬಡವರಿಗೆ, ಕಷ್ಟದಲ್ಲಿರುವವರಿಗೆ ಮಾನವೀಯತೆಯಿಂದ ಸ್ಪಂದಿಸಿ, ಅವರ ಸೇವೆ ನೀಡಲು ಆದ್ಯತೆ ನೀಡಬೇಕೆಂದು ಗ್ರಾಮ ಒನ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

    Grama One Anniversary

    ಸರ್ಕಾರ ಮತ್ತು ಜನಸಾಮಾನ್ಯರ ಕೊಂಡಿ

    ಗ್ರಾಮ ಒನ್ ಕಾರ್ಯಕರ್ತರಿಗೆ ಜಿಲ್ಲಾವಾರು ಪ್ರಶಸ್ತಿಗಳನ್ನು ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಕಾರ್ಯಕರ್ತರು ತಮ್ಮ ಅನುಭವಗಳನ್ನು ದಾಖಲಿಸಬೇಕು. ಶೇ.10ರಷ್ಟು ಕೆಲಸವನ್ನು ಹೆಚ್ಚಿಸುವ ನಿರ್ಧಾರ ಮಾಡಬೇಕು. ಗ್ರಾಮ ಒನ್ ಇತರೆ ರಾಜ್ಯಗಳಲ್ಲಿಯೂ ಪ್ರಾರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ಸಮಾಜದಲ್ಲಿ ಹೊಸ ಯುವಕರ ಪಡೆ ಇದೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ದಕ್ಷತೆಯಿಂದ ಕೊಂಡಿಯಂತೆ ಕೆಲಸ ಮಾಡುವ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು. ಘರ್ಷಣೆಗಳಿಲ್ಲದಂತೆ ಕೆಲಸ ಮಾಡುವಂತಾಗಬೇಕು. ಆರು ತಾಲೂಕುಗಳನ್ನು ಸಂಪೂರ್ಣವಾಗಿ ಕಾಗದ ರಹಿತ ಕಚೇರಿಗಳನ್ನಾಗಿ ಮಾಡಲು ಪ್ರಾಯೋಗಿಕವಾಗಿ ಕೈಗೊಂಡಿದ್ದು, ನಾಡಕಚೇರಿಗಳನ್ನೂ ಕಾಗದ ರಹಿತ ಕಚೇರಿಗಳನ್ನಾಗಿ ಮಾಡಲಾಗುವುದು. ಸರ್ವರ್ ಸಾಮರ್ಥ್ಯ ಹೆಚ್ಚಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತ ಸುಧಾರಣೆಯಾದರೆ ಎಲ್ಲರೂ ಯಶಸ್ವಿ ಆಗುತ್ತೇವೆ. ಅಧಿಕಾರದ ವಿಕೇಂದ್ರೀಕರಣದೊಂದಿಗೆ ಸೇವೆಗಳ ವಿಕೇಂದ್ರೀಕರಣವೂ ಆಗಬೇಕು ಎಂದ ಮುಖ್ಯಮಂತ್ರಿಯವರು, ಅಸಾಧ್ಯ ಎನ್ನುತ್ತಿದ್ದ ಕೆಲಸಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುತ್ತಿರುವುದಕ್ಕಾಗಿ ಅಭಿನಂದಿಸಿದರು.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts