ದಾವಣಗೆರೆ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಕರು 50 ಮೀಟರ್ ಬಟ್ಟೆಯಲ್ಲಿ ಚಿತ್ರಗಳೊಂದಿಗೆ ಘೋಷವಾಕ್ಯ ಬರೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಉದ್ಘಾಟಿಸಿ ಚಿತ್ರಗಳನ್ನು ವೀಕ್ಷಿಸಿದರು.
ಆಸೆಗೆ ಬಲಿಯಾಗದಿರಿ, ನಿಮ್ಮ ಮತ ಪವಿತ್ರವಾಗಿರಲಿ. ಭ್ರಷ್ಟರ ಮುಂದೆ ಬೇಡುವಿರೇಕೆ, ಮತ ಹಾಕಿ ಭ್ರಷ್ಟರನ್ನ ಸೋಲಿಸಿ. ನನ್ನ ಮತ ನನ್ನ ಹಕ್ಕು, ಪ್ರಥಮ ಕರ್ತವ್ಯ ಮತ ಚಲಾಯಿಸೋಣ ಬನ್ನಿ, ಮತದಾನಕ್ಕಾಗಿ ರಜಾ, ಮಜಾ ಮಾಡಲು ಅಲ್ಲ. ಸುಭದ್ರ ಸರ್ಕಾರ ರಚನೆಗೆ ನಿಮ್ಮ ಪವಿತ್ರ ಮತ ಸಾಕ್ಷಿಯಾಗಲಿ, ಜ್ಞಾನಕ್ಕಾಗಿ ಶಿಕ್ಷಣ ಪ್ರಜಾಪ್ರಭುತ್ವಕ್ಕಾಗಿ ಮತದಾನ ಎಂಬ ಘೋಷವಾಕ್ಯಗಳು ಗಮನ ಸೆಳೆದವು.
ಸುಮಾರು 100 ಚಿತ್ರಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್, ಡಯಟ್ ಪ್ರಾಚಾರ್ಯೆ ಗೀತಾ, ಡಯಟ್ ಉಪನ್ಯಾಸಕರು ಮತ್ತು ಚಿತ್ರಕಲಾ ಶಿಕ್ಷಕರು ಇದ್ದರು.