ಚಿಮ್ಮಡ: ಸರ್ಕಾರಿ ಶಾಲೆಗಳೆಂದರೆ ಪಾಲಕರು ಮೂಗುಮುರಿಯುವ ಪಾಲಕರಿಗೆ ಪ್ರಸಕ್ತ ಎಸ್ಎಸ್ಎಲ್ಸಿ ಫಲಿತಾಂಶ ತಕ್ಕ ಎಚ್ಚರಿಕೆ ನೀಡಿದೆ. ಅಲ್ಲಿ ಕಲಿಯುವವರು ಅಸಮರ್ಥರು ಎಂಬ ಮಾನಸಿಕ ಭಾವನೆ ಹೊಂದಿದ್ದು, ಅದರಿಂದ ಹೊರಬರಬೇಕು ಎಂದು ಸ್ಥಳೀಯ ವಿರಕ್ತಮಠದ ಪ್ರಭು ಶ್ರೀ ಹೇಳಿದರು.
ಗ್ರಾಮದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಬನಶಂಕರಿದೇವಿ ಸೇವಾ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಪ್ರತಿ ಮಗುವಿನಿಂದ ಲಕ್ಷಾಂತರ ರೂ. ದೇಣಿಗೆ (ಡೊನೇಷನ್) ಪಡೆದು, ಕಲಿಯುವ ಸಾಮರ್ಥ್ಯವಿರುವ ಮಕ್ಕಳನ್ನು ಮಾತ್ರ ನೋಂದಾಯಿಸಿಕೊಳ್ಳುವ ಖಾಸಗಿ ಶಾಲೆಗಳು ಮಾಡದಷ್ಟು ಸಾಧನೆಯನ್ನು ಸರ್ಕಾರಿ ಶಾಲೆಗಳು ಸಾಧಿಸಿವೆ. ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಿದರೆ ಶಾಲೆಗಳು ಮತ್ತಷ್ಟು ಸುಧಾರಣೆ ಕಾಣಲಿವೆ ಎಂದರು.
ಸಾಧು ಮಠದ ಶ್ರೀ ಜನಾರ್ದನ ಮಹಾರಾಜರು ಮಾತನಾಡಿ, ವಿದ್ಯೆ ಕಸಿಯಲಾಗದ ಸಂಪತ್ತು, ಸಾಧಿಸುವ ಛಲವಿದ್ದವರಿಗೆ ಯಾವುದೇ ಸಮಸ್ಯೆ ಅಡ್ಡಿಯಾಗದು ಎಂದರು.
ಸಮಾಜದ ಮುಖ್ಯಸ್ಥ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ, ನಿವೃತ್ತ ಮುಖ್ಯಶಿಕ್ಷಕ ಕಲ್ಲಪ್ಪ ವಿಜಾಪುರ, ಪ್ರವೀಣ ಮೈತ್ರಿ ಮಾತನಾಡಿದರು.
ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಜಾಡಗೌಡರ, ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ ಇದ್ದರು.
ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ 15 ವಿದ್ಯಾರ್ಥಿಗಳನ್ನು ಸತ್ಕರಿಸಿ, ನಗದು ನೀಡಿ ಸನ್ಮಾನಿಸಲಾಯಿತು. ಪ್ರವಿಣ ಮೈತ್ರಿ ಸ್ವಾಗತಿಸಿದರು. ಕೆ.ಎಂ. ಬಿಜಾಪೂರ ನಿರೂಪಿಸಿದರು. ಶಿಕ್ಷಕಿ ಶಾಖಾಂಬರಿ ಕರಡಿ ವಂದಿಸಿದರು.