ಬೆಂಗಳೂರು: ನ್ಯಾಯಾಲಯಗಳಲ್ಲಿ ಸರ್ಕಾರದ ವಿರುದ್ಧದ ಕೇಸ್ಗಳಿರಲಿ, ಸರ್ಕಾರವೇ ಹೂಡಿದ ಕೇಸ್ಗಳಿರಲಿ. ಸರ್ಕಾರಿ ಮೊಕದ್ದಮೆಗಳಿಗೆ ಪರ್ಯಾಯ ಪದವೇ ಸೋಲು.
ಆ ಮಟ್ಟಿಗೆ ವಿಶ್ವಾಸಾರ್ಹತೆ ಕುಂದಿದೆ ಎಂದು ವಿಧಾನ ಪರಿಷತ್ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಆತಂಕ ತೋಡಿಕೊಂಡರು.
‘ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ, 2023ಅನ್ನು ಪರ್ಯಾಲೋಚನೆಗೆ ಗುರುವಾರ ಮಂಡಿಸಿ ಮಾತನಾಡಿದ ಅವರು, ವಿವಿಧ ಕೋರ್ಟ್ಗಳಲ್ಲಿ ಲಕ್ಷಾಂತರ ಖಟ್ಲೆಗಳು ಬಾಕಿಯಿವೆ. ಇದರಿಂದಾಗಿ ಕೋರ್ಟ್ಗಳ ಮೇಲೆ ಹೊರೆ, ಸರ್ಕಾರಕ್ಕೆ ತೊಡಕುಂಟಾಗಿದೆ.
ವ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆಗೆ ಸರ್ಕಾರ ಆದೇಶ, ಸುತ್ತೋಲೆ, ಮೌಖಿಕವಾಗಿ ಸೂಚನೆ ನೀಡಿದ್ದರೂ ನಿರೀಕ್ಷಿತ ಲ ನೀಡಿಲ್ಲ.
ಕೆಲವೊಮ್ಮೆ ಇಲಾಖೆ ಅಧಿಕಾರಿಗಳು ಉದಾಸೀನತೆ, ಸರ್ಕಾರಿ ವಕೀಲರಿಂದ ಕೋರ್ಟ್ಗಳಲ್ಲಿ ಸಮರ್ಥ ವಾದ ಮಂಡನೆಯಾಗದೆ ಸರ್ಕಾರಕ್ಕೆ ಹಿನ್ನಡೆಯಾದದ್ದೂ ಇದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಹೈಕೋರ್ಟ್ನಲ್ಲಿ ವಾರ್ಷಿಕ 10 ಸಾವಿರದಂತೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,13,201 ಸಿವಿಲ್ ಮೊಕದ್ದಮೆಗಳು, ಜಿಲ್ಲಾ ಕೋರ್ಟ್ಗಳಲ್ಲಿ 26,512 ಸಿವಿಲ್ ದಾವೆಗಳಲ್ಲಿ ಸರ್ಕಾರಕ್ಕೆ ಸೋಲುಂಟಾಗಿದೆ. ಹಾಗೆಯೇ ಕ್ರಿಮಿನಲ್ ಕೇಸ್ಗಳಲ್ಲಿ ಶಿಕ್ಷೆ ವಿಧಿಸಿದ ಪ್ರಮಾಣ ಶೇ.3ಕ್ಕಿಂತ ಕಡಿಮೆಯಿದೆ.
ಅದೇ ರೀತಿ ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾ ಕೋರ್ಟ್ಗಳಲ್ಲಿ ಸರ್ಕಾರದ ವಿರುದ್ಧ 1,98,363 ಪ್ರಕರಣಗಳಿವೆ ಸರ್ಕಾರವೇ 44,349 ದಾವೆಗಳನ್ನು ಹೂಡಿದೆ ಎಂದು ಅಂಕಿ-ಅಂಶಗಳನ್ನು ವಿವರಿಸಿದರು.
ವ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಸರ್ಕಾರಿ ವಕೀಲರು, ಇಲಾಖೆಯ ಕಾನೂನು ಕೋಶ, ವಿವಿಧ ಇಲಾಖೆಗಳ ಹೊಣೆಗಾರಿಕೆ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ.
ಇದೇ ಉದ್ದೇಶಕ್ಕಾಗಿ ‘ಸರ್ಕಾರಿ ವ್ಯಾಜ್ಯ ನಿರ್ವಹಣೆ’ ವಿಶೇಷ ಕಾನೂನು ದೇಶದಲ್ಲೇ ಮೊಟ್ಟ ಮೊದಲು ರೂಪುಗೊಂಡಿದೆ ಎಂದು ಎಚ್.ಕೆ.ಪಾಟೀಲ್ ಅವರು ಮೇಲ್ಮನೆಗೆ ಮನವರಿಕೆ ಮಾಡಿಕೊಟ್ಟು, ಅಂಗೀಕಾರ ಪಡೆದರು.