ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ಬಜಾರನ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಖಾಸಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೇ ನಂ.288ಎ/2 ನಲ್ಲಿ ಭೂಮಿ ಸರ್ಕಾರಕ್ಕೆ ಸೇರಿದೆ. ಈಗಲೂ ಪಹಣಿಯಲ್ಲಿ ಕಂದಾಯ ಭೂಮಿ ಎಂದಿದೆ. ಪುರಸಭೆಯಲ್ಲಿ ಯಾವ ದಾಖಲೆ ಸೃಷ್ಟಿಸಿ ಖಾತೆ ತೆರೆದು ಕಟ್ಟಡದ ಪರವಾನಗಿ ನೀಡಿದ್ದಾರೆಯೋ ಗೊತ್ತಿಲ್ಲ. ಅಲ್ಲದೆ ನಿರಪೇಕ್ಷಣಾ ಪತ್ರ (ಎನ್ಒಸಿ) ನೀಡಿ ವಿದ್ಯುತ್ ಸಂಪರ್ಕ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ.
ಈ ಭೂಮಿಗೆ ಸಂಬಂಧಿಸಿದಂತೆ ಆರ್ಟಿಐ ಮೂಲಕ ಸರ್ಕಾರದಿಂದ ಅಧಿಕೃತ ದಾಖಲೆ ಪಡೆದಿದ್ದೇನೆ. ನಗರಾಭಿವದ್ಧಿ ಪ್ರಾಧಿಕಾರದಿಂದ ಕೃಷಿಭೂಮಿಯನ್ನು, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿತ ಎನ್ಎ ಪಡೆಯುವಾಗ ವಸತಿ ಉದ್ದೇಶಕ್ಕೆಂದು ಪಡೆದು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಸರ್ವೇ ನಂ. 288ಎ/2 ಭೂಮಿಯನ್ನು ಕಂದಾಯ ಇಲಾಖೆಯಿಂದ ಸರ್ವೇ ನಡೆಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದರೂ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ವಿಜಯನಗರ ಡಿಸಿ ಎಂ.ಎಸ್.ದಿವಾಕರ ಮಧ್ಯಪ್ರವೇಶಿಸಿ ಕ್ರಮಕೈಗೊಳ್ಳಬೇಕು ಎಂದರು.
ಅಹಿಂದ ವೇದಿಕೆ ತಾಲೂಕು ಸಂಚಾಲಕ ಲಿಂಗರಾಜ ಯಾದವ, ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಸರ್ದಾರ್ ಹುಲಿಗೆಮ್ಮ, ಸಂಚಾಲಕಿ ರೇಣುಕಾ, ರೈತ ಮುಖಂಡ ಭಂಟರ ಸೋಮಣ್ಣ, ಕರವೇ ಕಾವಲು ಪಡೆಯ ತಾಲೂಕಾಧ್ಯಕ್ಷ ಕೆ.ವಿ.ಎಂ.ವಿಶ್ವನಾಥ, ದಲಿತ ಮುಖಂಡ ಯಡ್ರಮ್ಮನಹಳ್ಳಿ ಮರಿಯಪ್ಪ, ಕರವೇ ಸಂಚಾಲಕ ಬಣಕಾರ ರಮೇಶ್ ಇದ್ದರು.