ಟೋಕಿಯೊ: ಸತತ 2ನೇ ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿರುವ ಪಿವಿ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಭಾನುವಾರ ಕಂಚಿನ ಪದಕ ಜಯಿಸಿದ ಬೆನ್ನಲ್ಲೇ ಪಿವಿ ಸಿಂಧುಗೆ, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್ ಅಭಿನಂದನೆಯ ಸಂದೇಶ ಕಳುಹಿಸಿದ್ದಾರೆ. ಆದರೆ, ಹಿರಿಯ ಜತೆಗಾರ್ತಿ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮಾತ್ರ ಇದುವರೆಗೂ ಸಿಂಧು ಅವರನ್ನು ಅಭಿನಂದಿಸಿಲ್ಲ. ಸೈನಾ ಕುರಿತು ಪ್ರತಿಕ್ರಿಯಿಸಿದ ಸಿಂಧು, ‘ಗೋಪಿ ಸರ್ ನನಗೆ ವಿಶ್ ಮಾಡಿದ್ದಾರೆ. ಆದರೆ, ಸೈನಾ ನೆಹ್ವಾಲ್ ಇದುವರೆಗೂ ಅಭಿನಂದಿಸಿಲ್ಲ. ನಾವಿಬ್ಬರು ಅಷ್ಟು ಮಾತನಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಸಿಂಧು ಹಾಗೂ ಸೈನಾ ನಡುವಿನ ನಡೆಯುತ್ತಿದ್ದ ಶೀತಲ ಸಮರವೇ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಭಾರತದ ಮಹಿಳಾ ಡಿಸ್ಕಸ್ಥ್ರೋ ಪಟು ಕಮಲ್ಪ್ರೀತ್ ಕೌರ್ಗೆ ನಿರಾಸೆ,
2019ರ ವಿಶ್ವ ಚಾಂಪಿಯನ್ಷಿಪ್ ಜಯಿಸಿದ ಬಳಿಕ ಸಿಂಧು, ಗೋಪಿಚಂದ್ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಇದಕ್ಕಾಗಿಯೇ ಸಿಂಧು ಕಳೆದ ವರ್ಷ ಲಂಡನ್ಗೆ ತೆರಳಿದ್ದರು. ಬಳಿಕ ಗೋಪಿಚಂದ್ ಅಕಾಡೆಮಿ ತೊರೆದಿದ್ದ ಸಿಂಧು, ಕೊರಿಯಾ ಕೋಚ್ ಪಾರ್ಕ್ ಟೀ ಸಾಂಗ್ ಮಾರ್ಗದರ್ಶನದಲ್ಲಿ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಇದಕ್ಕೆ ಗೋಪಿಚಂದ್ ಹಾಗೂ ಸಿಂಧು ನಡುವಿನ ಅಸಮಾಧಾನವೇ ಕಾರಣ ಎನ್ನಲಾಗಿತ್ತು. ಆದರೆ, ಈ ಕುರಿತು ಗೋಪಿಚಂದ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಚೊಚ್ಚಲ ಆವೃತ್ತಿಯ ದ ಹಂಡ್ರೆಡ್ ಟೂರ್ನಿಗೆ ಮುಂದುವರಿದ ವೈರಸ್ ಕಾಟ,
ಮತ್ತೊಂದೆಡೆ, ಗೋಪಿಚಂದ್ ಅಕಾಡೆಮಿಯಲ್ಲೇ ತರಬೇತಿ ಪಡೆಯುತ್ತಿದ್ದ ಸೈನಾ ನೆಹ್ವಾಲ್, ಪಿವಿ ಸಿಂಧುಗೆ ಹೆಚ್ಚಿನ ಪ್ರಾಶಸ್ಯ ನೀಡಲಾಗುತ್ತಿದೆ ಎಂದು ಅಸಮಾಧಾನಗೊಂಡು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಬಳಿಕ 2017ರಲ್ಲಿ ಗೋಪಿಚಂದ್ ಅಕಾಡೆಮಿಗೆ ಸೈನಾ ವಾಪಸಾಗಿದ್ದರು. ಕೋವಿಡ್-19ನಿಂದಾಗಿ ಹೆಚ್ಚು ಟೂರ್ನಿಗಳು ನಡೆಯದ ಕಾರಣ ಸೈನಾ ನೆಹ್ವಾಲ್ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಲರಾಗಿದ್ದರು.