ಗಂಗಾವತಿ: ಬಡ ಜನರ ಅನುಕೂಲಕ್ಕಾಗಿ ನಗರದ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ತಾಲೂಕು ಸಮಿತಿ ಸದಸ್ಯರು ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಪರಿಸರ ಇಂಜಿನಿಯರ್ ಚೇತನನಾಯ್ಕಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಯಮನೂರಭಟ್ ಮಾತನಾಡಿ, ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಿಂದ ಅಭ್ಯಾಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಂದೇ ಇಂದಿರಾ ಕ್ಯಾಂಟೀನ್ ಇದ್ದು, ಬಡ ಜನರಿಗೆ ಅನುಕೂಲವಾಗುತ್ತಿಲ್ಲ. ನಗರದ ಹಳೇ ಪ್ರವಾಸಿ ಮಂದಿರದ ಬಳಿ ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರಂಭವಾಗಲಿಲ್ಲ. ಹೀಗಾಗಿ ದುಬಾರಿ ದರ ನೀಡಿ ಹೋಟೆಲ್ನಲ್ಲಿ ಹಸಿವು ನೀಗಿಸಿಕೊಳ್ಳುವ ಸ್ಥಿತಿ ಬಂದಿದೆ. ಬಸ್ ನಿಲ್ದಾಣದ ಬಳಿ ಇನ್ನೊಂದು ಕ್ಯಾಂಟೀನ್ ಆರಂಭಿಸಿದರೆ ಬಡ, ಕೂಲಿ ಕಾರ್ಮಿಕರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಪದಾಧಿಕಾರಿಗಳಾದ ಪವನಕುಮಾರ ಗಡ್ಡಿ, ಹನುಮೇಶ ಕುರಬರ್, ಅಂಬಾಸ್ ಸುನೀಲ್ಕುಮಾರ ಕುಲ್ಕರ್ಣಿ, ಹನುಮೇಶ್ ಛಲವಾದಿ, ಸುರೇಶ್ ಚನ್ನಳ್ಳಿ, ನಹೀಮ್ ಪಾಷಾ, ರಮೇಶಕುಮಾರ್, ಹುಲುಗಪ್ಪ ಅರೆಗಾರ, ಮುತ್ತುರಾಜ್ ಕುಷ್ಟಗಿ, ನಯೂಮ್ ಪಾಷಾ, ಬಸವರಾಜ್ ಬೀದಿಬಾವಿ, ಮೊಹಮ್ಮದ್ ಗೌಸ್, ನಾಗರಾಜ ಛಲುವಾದಿ, ಅನಿಲ್ಕುಮಾರ್, ನಿಂಗಪ್ಪ ಹೊಸಳ್ಳಿ, ವಿಜಯಕುಮಾರ ಸಮಗಾರ ಇತರರಿದ್ದರು.