ಗಂಗಾವತಿ: ಮನೆಗಳ ಪಟ್ಟಾಕ್ಕಾಗಿ ಮತದಾನ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡ ಗ್ರಾಮಸ್ಥರೊಂದಿಗೆ ಗಂಗಾವತಿ ತಾಲೂಕಿನ ಚಿಕ್ಕರಾಂಪುರ 1 ಆಂಜನೇಯ ದೇವಾಲಯ ಆವರಣದಲ್ಲಿ ಜಿಲ್ಲಾಡಳತದಿಂದ ವಿಶೇಷ ಸಭೆ ಶುಕ್ರವಾರ ನಡೆಯಿತು.
ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಎಸಿ ಕ್ಯಾ.ಮಹೇಶಕುಮಾರ ಮಾಲಗಿತ್ತಿ ಮಾತನಾಡಿ, ಮತದಾನ ಬಹಿಷ್ಕರಿಸುವುದು ಒಳ್ಳೆಯದಲ್ಲ. ಕಾನೂನು ವ್ಯಾಪ್ತಿಯಲ್ಲಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಚುನಾವಣೆ ನಂತರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು. ಇದಕ್ಕೆ ಒಪ್ಪದ ಗ್ರಾಮಸ್ಥರು, ಪಟ್ಟಾ ನೀಡಲು ಕಾನೂನಿನಲ್ಲಿ ಅವಕಾಶವಿದ್ದು, ಡಿಸಿ ಅವರನ್ನು ಗ್ರಾಮಕ್ಕೆ ಕರೆಯಿಸಿ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ ಮಾತನಾಡಿ, ಕಡೇಬಾಗಿಲುನಿಂದ ಸಣಾಪುರವರೆಗೂ ಪಟ್ಟಾ ಸಮಸ್ಯೆಯಿದ್ದು, ಪ್ರತಿ ಚುನಾವಣೆಯಲ್ಲೂ ಬಹಿಷ್ಕಾರ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಂದಾಯ, ಹಂಪಿ ಪ್ರಾಧಿಕಾರ, ಅರಣ್ಯ ಅಧಿಕಾರಿಗಳ ಸಮನ್ವಯತೆಯೊಂದಿಗೆ ಪಟ್ಟಾ ಸಮಸ್ಯೆ ಇತ್ಯರ್ಥಪಡಿಸಲು ಅವಕಾಶವಿದ್ದು, ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಗ್ರಾಮೀಣ ಪಿಐ ಸೋಮಶೇಖರ್ ಜುತ್ತಲ್, ವಲಯ ಅರಣ್ಯಾಧಿಕಾರಿ ಸುಭಾಷಚಂದ್ರನಾಯಕ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮಾಡಳಿತಾಧಿಕಾರಿ ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಪ್ಪ ಬಾಳಿಕಾಯಿ ವಿವಿಧ ಗ್ರಾಮಗಳ ಗ್ರಾಮಸ್ಥರಿದ್ದರು.