ಗಂಗಾವತಿ: ಜಂಗಮ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠಗೊಳ್ಳಬೇಕಿದೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.
ನಗರದ ಕಿಲ್ಲಾ ಏರಿಯಾದ ಕೋಟೆ ವೀರಭದ್ರೇಶ್ವರ ದೇವಾಲಯದಲ್ಲಿ ಹಿರೇಜಂತಕಲ್ಲಿನ ವೀರಮಹೇಶ್ವರ ಜಂಗಮ ಸಂಘ ಹಮ್ಮಿಕೊಂಡಿದ್ದ ಮನೆಮನೆಗೆ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸಂಘಟನೆ ಬಲಿಷ್ಠವಾದರೆ ಹಕ್ಕುಗಳನ್ನು ಪಡೆಯಲು ಸಾಧ್ಯವಿದ್ದು, ಮೀಸಲಿಗಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸಬೇಕು. ಸಮುದಾಯದ ಆರ್ಥಿಕಾಭಿವೃದ್ಧಿಗೆ ಸಂಘ ಶ್ರಮಿಸಬೇಕಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಹತೆ ಪಡೆಯಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಮೀಸಲಿಗಾಗಿ ಸಮಾಜದ ಮುಖಂಡ ಬಿ.ಡಿ.ಹಿರೇಮಠ 200 ದಿನಗಳಿಂದ ಧರಣಿ ನಡೆಸುತ್ತಿದರೂ, ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಸಂಘಟನಾತ್ಮಕವಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು. ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಸಹ ಸಂಚಾಲಕ ಬಸವರಾಜ ಸ್ವಾಮಿ ಮಳೀಮಠ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಶಂಕರಯ್ಯ ಹಿರೇಮಠ, ಪದಾಧಿಕಾರಿಗಳಾದ ಹುಚ್ಚಯ್ಯಸ್ವಾಮಿ, ಎಸ್.ಬಿ.ಹಿರೇಮಠ, ಆದೆಯ್ಯ ಹಿರೇಮಠ, ಮುಖಂಡರಾದ ರೇವಣಸಿದ್ದಯ್ಯಸ್ವಾಮಿ, ಶಾಂತಮಲ್ಲಯ್ಯ ಸ್ವಾಮಿ, ಸಂಗಯ್ಯಸ್ವಾಮಿ ಸಂಶಿಮಠ ಎಚ್.ಎಚ್.ವಿರೂಪಾಕ್ಷಯ್ಯಸ್ವಾಮಿ, ಎಚ್.ಎಂ.ಬಸವರಾಜ ಇತರರಿದ್ದರು.