ಗಂಗಾವತಿ: ನಿವೇಶನ ಖಾತಾ ನೋಂದಣಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ಕೂಲಿ ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂಭಾಗ ಸ್ಥಳೀಯ ನಿವಾಸಿಗಳೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಪಿಡಿಒ ವತ್ಸಲಾಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಹಂಪೇಶ ಹರಿಗೋಲು ಮಾತನಾಡಿ, ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಅಂಬೇಡ್ಕರ್ ನಗರದ ಸ.ನಂ.54ರಲ್ಲಿ 300 ಕುಟುಂಬಗಳು ವಾಸವಾಗಿದ್ದು, ಖಾತಾ ನೋಂದಣಿ ತೊಂದರೆಯಿಂದ ಸೌಲಭ್ಯಗಳು ದೊರೆಯುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಸ್ಟೋರ್ ಕ್ಯಾಂಪ್ ಮತ್ತು ಗದ್ವಾಲ್ ಕ್ಯಾಂಪ್ಗಳಲ್ಲಿ ಈಗಾಗಲೇ ನೋಂದಣಿಯಾಗಿದ್ದು, ಅಂಬೇಡ್ಕರ್ ನಗರವನ್ನು ಗ್ರಾಪಂ ನಿರ್ಲಕ್ಷಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯನ್ವಯ ಕೆಲಸ ಮಾಡಿದ ಕೂಲಿಕಾರರಿಗೆ ಹಲವು ತಿಂಗಳಿಂದ ಕೂಲಿ ವಿತರಿಸಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿವರಿಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ತಾಲೂಕು ಸಂಚಾಲಕ ಮುದ್ದಣ್ಣ ನಾಯಕ, ಸದಸ್ಯರಾದ ಕನಕಪ್ಪ ನಾಯಕ, ದುರುಗೇಶ, ಹನುಮಂತಪ್ಪ ಭೋವಿ ಚಳ್ಳಾರಿ, ನಾಗಮ್ಮ, ಯಮನೂರಪ್ಪ ನಾಯಕ ಇತರರಿದ್ದರು.