ವಿಜಯವಾಣಿ ಸುದ್ದಿಜಾಲ ಕೋಟ
ದಲಿತರು ಗುಡಿಗೋಪುರ ಸುತ್ತುವುದು ಬಿಟ್ಟು ಸಮುದಾಯಕ್ಕೊಸ್ಕರ ದುಡಿದ ತ್ಯಾಗಿಗಳ ಸಮಾಧಿ ಸುತ್ತಲಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಕೋಟದ ಸಿಎ ಬ್ಯಾಂಕ್ ಬಿ.ಸಿ.ಹೊಳ್ಳ ಸಭಾಂಗಣದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ಬುಕ್, ಪ್ರತಿಭಾ ಪುರಸ್ಕಾರ ‘ಅಕ್ಷರದಕ್ಕರೆ’ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿರು.
ಸಂವಿಧಾನ ಇಲ್ಲದಿದ್ದರೆ ದಲಿತ ಸಮುದಾಯ ಅಧೋಗತಿ ಕಾಣಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಕೆಳವರ್ಗದ ಜನರ ಜೀವನಕ್ಕೆ ಭದ್ರ ಬುನಾದಿ ನೀಡಿದೆ. ಶಿಕ್ಷಣದಿಂದ ಕ್ರಾಂತಿ ಸಾಧ್ಯ. ಸಮುದಾಯದ ಪಾಲಕರು ಜಾಗೃತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಈ ದಿಸೆಯಲ್ಲಿ ಕೋಟ ಹೋಬಳಿ ಸಂಘಟನೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ದಸಂಸ ಕೋಟ ಹೋಬಳಿ ಸಂಚಾಲಕ ನಾಗರಾಜ್ ಪಡುಕರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟ ಸಂಚಾಲಕಿ ಗೀತಾ ಸುರೇಶ್ ಕುಮಾರ್, ರಾಜ್ಯ ಸಮಿತಿ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಚಾಲಕ ಶಾಮರಾಜ್ ಬಿರ್ತಿ, ವಾಸುದೇವ ಮುದ್ದೂರ್, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ಸಂಚಾಲಕ ನಾಗರಾಜ್ ಉಪ್ಪುಂದ, ಬ್ರಹ್ಮಾವರ ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಜಿಲ್ಲಾ ಸಂಚಾಲಕ ಎನ್.ಎ.ನೇಜಾರ್ ಉಪಸ್ಥಿತರಿದ್ದರು.
ಜಿಲ್ಲಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ, ವಕೀಲ ಟಿ.ಮಂಜುನಾಥ್ ಗಿಳಿಯಾರು ಪ್ರಸ್ತಾವಿಸಿದರು. ಉಪನ್ಯಾಸಕ ಮಂಜುನಾಥ್ ಕೆ.ಎಸ್., ಸಂತೋಷ್ ಕುಮಾರ್ ಕೋಟ, ನಾಗರಾಜ್ ಗುಳ್ಳಾಡಿ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು.
ಸನ್ಮಾನ, ನೋಟ್ಬುಕ್ ವಿತರಣೆ
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹಾಗೂ ರಾಜ್ಯ ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್, ಯುವ ಭಾಗವತ ನವೀನ್ ಕೋಟ, ಯಕ್ಷ ಸಾಧಕಿ ಲಿಖಿತಾ ಗಿಳಿಯಾರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸಲಾಯಿತು.